ರಾಜ್ಯದ ಬಿಜೆಪಿ ಆಡಳಿತಲ್ಲಿ ಅತ್ಯಾಚಾರಿಗಳಿಗೆ, ಕಾಮುಕರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ – ಕಾಂಗ್ರೆಸ್ ನಾಯಕಿ ವೆರೋನಿಕಾ ಕರ್ನೆಲಿಯೊ

ರಾಜ್ಯದ ಬಿಜೆಪಿ ಆಡಳಿತಲ್ಲಿ ಅತ್ಯಾಚಾರಿಗಳಿಗೆ, ಕಾಮುಕರಿಗೆ ಕಾನೂನಿನ ಭಯವೇ ಇಲ್ಲದಂತಾಗಿರುವುದಕ್ಕೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆದ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯಲ್ಲಿ ಸಾಬೀತಾಗಿದೆ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೊ ಹೇಳಿದ್ದಾರೆ.

ಟ್ಯೂಷನ್‌ಗೆ ತೆರಳಿದ್ದ 10 ವರ್ಷದ ಬಾಲಕಿ ಮೇಲೆ 52 ವರ್ಷದ ವ್ಯಕ್ತಿ ಅತ್ಯಾಚಾರಗೈದು ಕೊಲೆ ಮಾಡಿರುವುದು ಇಡೀ ಸಮಾಜವೇ ತಲೆತಗ್ಗಿಸುವ ಸಂಗತಿಯಾಗಿದೆ. ಟ್ಯೂಷನ್‌ ಸೆಂಟರ್‌ನಲ್ಲಿ ಮೇಲ್ವಿಚಾರಕನಾಗಿದ್ದ ಆರೋಪಿ ಕಾಂತರಾಜು ಪುಟ್ಟಬಾಲಕಿಯ ಮೇಲೆ ಅತ್ಯಾಚಾರಗೈದು ಬೆಳೆಯುವ ಸಿರಿ ಮೊಳಕೆಯಲ್ಲೇ ಚಿವುಟಿ ಹಾಕಿದಂತೆ ಬಾಲಕಿಯನ್ನು ಕೊಲೆ ಮಾಡಿ ಪೋಷಕರು ಜೀವವಿರುವ ತನಕ ಕೊರಗುವಂತೆ ಮಾಡಿದ್ದಾನೆ.

ರಾಜ್ಯದಾದ್ಯಂತ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಅಕ್ರಮಗಳು ಕೊಲೆ, ಅಪರಾಧ ಪ್ರಕರಣಗಳು ಪ್ರತಿನಿತ್ಯ ಹೆಚ್ಚಾಗುತ್ತಿವೆ. ಗಾಂಜಾ, ಅಕ್ರಮ ಮದ್ಯ ಮಾರಾಟದಿಂದ ಅಪರಾಧಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತಿದ್ದು ಗೃಹ ಇಲಾಖೆಯ ಸಚಿವರು ತನ್ನ ಅಧೀನದ ಅಧಿಕಾರಿಗಳಿಗೆ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡುವಲ್ಲಿ ವಿಫರಾಗಿದ್ದಾರೆ.

ಮಳವಳ್ಳೀಯ ಬಾಲಕಿ ಅತ್ಯಾಚಾರಗೈದು ಕೊಲೆ ಮಾಡಿರುವುದು ತಲೆ ತಗ್ಗಿಸುವ ವಿಚಾರ. ಆರೋಪಿಯನ್ನು ಬಂಧಿಸಲಾಗಿದೆ. ಕೃತ್ಯ ಎಸಗಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ನೀಡಬೇಕು. ಘಟನೆಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮೃತ ಕುಟುಂಬಕ್ಕೆ ಪರಿಹಾರ ನೀಡುವ ಕೆಲಸವನ್ನು ಸರಕಾರ ಮಾಡುವ ಮೂಲಕ ನೊಂದ ಕುಟುಂಬಕ್ಕೂ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Latest Indian news

Popular Stories