ಕಾರವಾರ : ಎಲ್ಲಾ ಬ್ರಾಹ್ಮಣರು ಸೇರಿ ಕಾಗೇರಿಯನ್ನು ಆರಿಸುವ ಎಂಬ ಹಾಡು ವೈರಲ್ ಆಗಿದೆಯಲ್ಲಾ, ಅನಂತ ಕುಮಾರ್ ಹೆಗಡೆ ಬೆಂಬಲಿಗರು ಇದನ್ನು ವೈರಲ್ ಮಾಡುತ್ತಿದ್ದರಲ್ಲಾ ಎಂಬ ಪ್ರಶ್ನೆಗೆ ಇದು ಕಾಂಗ್ರೆಸ್ ನಲ್ಲಿರುವ ಬ್ರಾಹ್ಮಣರ ಕೈವಾಡ ಇರಬಹುದು ಎಂದು ರವಿ ಹೆಗಡೆ ಹೂವಿನಮನೆ ಹೇಳಿದರು .
ಕಾರವಾರದಲ್ಲಿ ಸುದ್ದಿಗೋಷ್ಟಿ ಮಾಡಿದ ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಒಂದು ಜಾತಿಯ ಮತದಿಂದ ಗೆಲ್ಲಲು ಅಸಾಧ್ಯ. ಹಾಡು ಯಾರೋ ಅಭಿಮಾನದಿಂದ ಮಾಡಿರಬಹುದು ಎಂದರು. ಇತರೆ ಜಾತಿಯ ಮತಗಳು ಬೇಡವೇ ಕಾಗೇರಿ ಅವರಿಗೆ ? ಇದು ಅತಿರೇಕದ ಸ್ವ ಜನ ಪಕ್ಷಾತವಲ್ಲವೇ? ಬಿಜೆಪಿ ಬ್ರಾಹ್ಮಣರಿಗೆ ಸೇರಿದ್ದು ಎಂಬ ಧ್ವನಿ ಆ ಹಾಡಿನಲ್ಲಿದೆ . ಇದು ನಿಮಗೆ ತೊಡಕಲ್ಲವೇ? ನಿಮ್ಮವರೇ ಇದನ್ನು ವೈರಲ್ ಮಾಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ರವಿ ಹೆಗಡೆ ನಿರುತ್ತರರಾದರು.
ಇದೇ ವೇಳೆ ಅವರು ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಪ್ರಣಾಳಿಕೆಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು ಪ್ರವಾಸೋದ್ಯಮ, ಸಾರಿಗೆ ಸಂಪರ್ಕ, ಕೃಷಿ, ಅರಣ್ಯ, ಉದ್ಯೋಗ ಸೃಷ್ಟಿಗೆ ಒತ್ತು ನೀಡಿದೆ.
ಸಂಸದರ ಸಂಚಾರಿ ಕಚೇರಿ ತೆರೆಯುತ್ತೇವೆ. ಪ್ರತಿ ಗ್ರಾಮ ಪಂಚಾಯತ್ ಬೆಸೆಯುವ ಉದ್ದೇಶ ಸಂಚಾರಿ ಕಚೇರಿಯದ್ದಾಗಿದ್ದು , ಯೋಜನೆಗಳ ಅನುಷ್ಠಾನದ ಉದ್ದೇಶವಿದೆ ಎಂದು ರವಿ ಹೆಗಡೆ ಹೂವಿನಮನೆ ಹೇಳಿದರು .
ಸಕ್ಷಮ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.
ಪ್ರವಾಸೋದ್ಯಮ, ಸಾರಿಗೆ ಸಂಪರ್ಕ, ಕೃಷಿ, ಅರಣ್ಯ, ಉದ್ಯೋಗ ಸೃಷ್ಟಿ ದೃಷ್ಟಿಯಿಂದ ಮುನ್ನೋಟದ ಸಂಕಲ್ಪ ಪತ್ರದಲ್ಲಿ ನೀಡಲಾಗಿದೆ. ರಾಜ್ಯ ಕೇಂದ್ರ ಸರ್ಕಾರದ ಸಹಕಾರದಲ್ಲಿ ಈ ಯೋಜನೆ ಜಾರಿಯಾಗಲಿವೆ. ಆದರೆ ಜನರ ಸಹಭಾಗಿತ್ವ ಬೇಕು ಎಂದರು.
ಸಂಕಲ್ಪ ಪತ್ರದಲ್ಲಿ ಹೇಳಿದಂತೆ ನಡೆದುಕೊಳ್ಳುತ್ತೇವೆ.
ಸಹಕಾರದಿಂದ ಕುಡಿಯುವ ನೀರಿಗಾಗಿ ಕಿರು ಅಣೆಕಟ್ಟು ನಿರ್ಮಿಸುತ್ತೇವೆ . ಕೃಷಿ ಗೆ ಪೂರಕ ಅಣೆಕಟ್ಟು ಸಹ ಮಾಡುವೆವು. ಅಂಕೋಲಾ – ಹುಬ್ಬಳ್ಳಿ ರೈಲ್ವೆ ಮಾರ್ಗ ಅನುಷ್ಠಾನ ಅಂತಿಮ ಹಂತದಲ್ಲಿ ಇದೆ. ಅದನ್ನು ಮಾಡೇ ಮಾಡ್ತೇವೆ. ಬಿಜೆಪಿ ಅಭಿವೃದ್ಧಿ ಪರ ಎಂದು ರವಿ ಹೆಗಡೆ ಹೇಳಿದರು. ಪರಿಸರಕ್ಕೆ ಕಡಿಮೆ ಹಾನಿಯಾಗುವ ಯೋಜನೆಗಳನ್ನು ಅನುಷ್ಠಾನ ಮಾಡಿಯೇ ಮಾಡ್ತೇವೆ. ಎಲ್ಲಾ ಯೋಜನೆಗಳನ್ನು ಪರಿಸರ ರಕ್ಷಣೆಯ ಹೆಸರಲ್ಲಿ ಕೈ ಬಿಡಲ್ಲ ಎಂದರು . ಸಣ್ಣ ಸಣ್ಣ ಟೌನ್ ಶಿಪ್ ನಿರ್ಮಿಸುತ್ತೇವೆ ಎಂದರು.
ಅಂಜಲಿ ನಿಂಬಾಳ್ಕರ್ ಶಾಸಕರಾಗಿ ಒಂದೇ ಅವಧಿಯಲ್ಲಿ ಕೆಲಸ ಮಾಡಿದ್ದರೆ,ಖಾನಾಪುರದಲ್ಲಿ ಯಾಕೆ ಸೋತರು ಎಂದು ರವಿ ಹೆಗಡೆ ಪ್ರಶ್ನಿಸಿದರು .ರಾಷ್ಟ್ರೀಯ ಕಲ್ಪನೆ ಅವರಿಗೆ ಕಡಿಮೆಯಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು, ನಮ್ಮ ಕಾರ್ಯಕರ್ತರ ಜೊತೆ ಹಿಂದುತ್ವದ ಬಗ್ಗೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು. ಪ್ರಜಾಪ್ರಭುತ್ವದ ಲಕ್ಷಣವೇ ಚರ್ಚೆ. ಅದಕ್ಕೆ ನಾವು ಸಿದ್ಧ ಎಂದರು .
ಸುಭಾಷ್ ಗುನಗಿ, ಕಿಶನ್ ಕಾಂಬಳೆ,ಮನೋಜ ಭಟ್ಟ, ನಾಗೇಶ್ ಕುರಡೇಕರ್ ಉಪಸ್ಥಿತರಿದ್ದರು.
……