ಶಾಸಕ ರಹೀಂಖಾನ್ ವಿಶ್ವಾಸ ಕಾಂಗ್ರೆಸ್ ಕೈಗೆ ನಗರಸಭೆ ಚುಕ್ಕಾಣಿ

ಬೀದರ್: ಬೀದರ್ ನಗರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಬೀದರ್ ಶಾಸಕ ರಹೀಂಖಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
10 ವರ್ಷಗಳ ಅಧಿಕಾರ ಅವಧಿಯಲ್ಲಿ ಬೀದರ್ ನಗರವೂ ಸೇರಿದಂತೆ ಬೀದರ್ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸಾವಿರ ಕೋಟಿಗೂ ಅಧಿಕ ಮೊತ್ತದ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಸಂಕಷ್ಟ ಹೇಳಿಕೊಂಡು ಬಂದ ಅನೇಕರಿಗೆ ವೈಯಕ್ತಿಕವಾಗಿಯೂ ಕೈಲಾದ ನೆರವು ನೀಡಿದ್ದೇನೆ. ನಗರಸಭೆ ಚುನಾವಣೆ ಫಲಿತಾಂಶ ಇದೆಲ್ಲದರ ಫಲಶ್ರುತಿಯೇ ಆಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಬೀದರ್ ನಗರದಲ್ಲಿ ಏನೇನು ಅಭಿವೃದ್ಧಿ ಕಾರ್ಯಗಳು ಆಗಿವೆ ಎನ್ನುವುದು ಜನರ ಕಣ್ಣೆದುರೇ ಇದೆ. ನನ್ನ ಕೆಲಸಗಳಿಗೆ ಮನ್ನಣೆ ನೀಡಿ 15 ವಾರ್ಡ್‍ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿರುವ ಮತದಾರರಿಗೆ ಕೃತಜ್ಞನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಕೆಲ ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಡಿಮೆ ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ವಿಜೇತ ಅಭ್ಯರ್ಥಿಗಳು ಆಯಾ ವಾರ್ಡ್‍ಗಳಿಗೆ ಮೂಲಸೌಕರ್ಯ ಒದಗಿಸುವ ಹಾಗೂ ಜನರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

Latest Indian news

Popular Stories