ಮಾನವೀಯತೆ ಮೆರೆದ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ೧.೫ ಲಕ್ಷ ಜನರಿಗೆ ಆಹಾರ ಪೊಟ್ಟಣ ವಿತರಣೆ

ಬೀದರ್: ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಅವರು ತಮ್ಮ ತಂದೆ ಧರ್ಮಸಿಂಗ್ ಅವರ ಹೆಸರಿನ ಫೌಂಡೇಶನ್ ವತಿಯಿಂದ ಹದಿನೈದು ದಿನಗಳ ಅವಧಿಯಲ್ಲಿ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ೧.೫ ಲಕ್ಷ ಜನರಿಗೆ ಉಚಿತ ಆಹಾರ ಪೊಟ್ಟಣ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನಿತ್ಯ ಅವರು ಕೋವಿಡ್ ಪ್ರಯುಕ್ತ ವಿಧಿಸಲಾದ ಲಾಕ್‌ಡೌನ್‌ನಿಂದ ತೊಂದರೆಗೆ ಒಳಗಾದ
ಬಸವಕಲ್ಯಾಣ ನಗರ ಹಾಗೂ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಬಡವರು, ನಿರ್ಗತಿಕರು, ಅಲೆಮಾರಿಗಳು, ಕೋವಿಡ್ ಸೋಂಕಿತರು, ರೋಗಿಗಳು ಸೇರಿದಂತೆ ೧೦ ಸಾವಿರ ಜನರಿಗೆ ಆಹಾರ ಪೂರೈಕೆ ಮಾಡುತ್ತಿದ್ದಾರೆ.
ಚಪಾತಿ, ಪಲ್ಯ, ಅನ್ನ, ಸಾಂಬಾರು, ಮೊಸರು, ಮಜ್ಜಿಗೆ ಒಳಗೊಂಡ ಆಹಾರ ಪೊಟ್ಟಣ ವಿತರಣೆ ಮಾಡುತ್ತಿದ್ದಾರೆ. ಒಂದು ದಿನ ವೆಜ್ ಬಿರಿಯಾನಿ, ಮತ್ತೊಂದು ದಿನ ಆಲೂಭಾತ್, ಇನ್ನೊಂದು ದಿನ ಚಿತ್ರಾನ್ನ ಹೀಗೆ ಬೇರೆ ಬೇರೆ ರೀತಿಯ ಆಹಾರ ಒದಗಿಸುತ್ತಿದ್ದಾರೆ.
ಸಂಕಷ್ಟದಲ್ಲಿದ್ದವರಿಗೆ ನೆರವಾಗುವುದು ನಮ್ಮ ಧರ್ಮ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೧೫ ದಿನಗಳಿಂದ ನಿರಂತರ ಅನ್ನ ದಾಸೋಹ ಮಾಡುತ್ತಿದ್ದೇನೆ. ಲಾಕ್‌ಡೌನ್ ಮುಗಿಯುವವರೆಗೂ ಆಹಾರ ಪೊಟ್ಟಣ ವಿತರಿಸಲಾಗುವುದು ಎಂದು ವಿಜಯಸಿಂಗ್ ತಿಳಿಸಿದ್ದಾರೆ.
ಆಹಾರ ಸರಬರಾಜು ಮಾಡಲು ನಿತ್ಯ ೧೦ ಕ್ವಿಂಟಲ್ ಅಕ್ಕಿ ಬಳಸಲಾಗುತ್ತಿದೆ. ಅಡುಗೆ ತಯಾರಿಕೆ, ಪ್ಯಾಕಿಂಗ್ ಹಾಗೂ ವಿತರಣೆ ಕಾರ್ಯದಲ್ಲಿ ಪ್ರತ್ಯೇಕ ತಂಡಗಳು ಕಾರ್ಯನಿರತವಾಗಿವೆ. ಧರ್ಮಸಿಂಗ್ ಫೌಂಡೇಶನ್ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೋವಿಡ್ ಸೋಂಕಿತರನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸಲು ಬಸವಕಲ್ಯಾಣ ಹಾಗೂ ಹುಲಸೂರು ತಾಲ್ಲೂಕಿಗೆ ಒಟ್ಟು ಎರಡು ಹಾಗೂ ಔರಾದ್ ತಾಲ್ಲೂಕಿಗೆ ಒಂದು ಆಂಬುಲನ್ಸ್ ಒದಗಿಸಲಾಗಿದೆ. ಆಂಬುಲನ್ಸ್ಗಳು ರೋಗಿಗಳಿಗೆ ಉಚಿತ ಸೇವೆ ನೀಡಲಿವೆ. ಅವಶ್ಯಕತೆ ಇರುವವರು ಆಂಬುಲನ್ಸ್ ಸೇವೆಯ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

Latest Indian news

Popular Stories