ಮಂಗಳೂರು, ಮೇ 7: ”ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಂದು ಹಾಸಿಗೆ, ಎಲ್ಲಾ ತಾಲೂಕು ಮತ್ತು ಸಮುದಾಯ ಆಸ್ಪತ್ರೆಗಳಲ್ಲಿ ಎರಡು ಹಾಸಿಗೆಗಳು ಮತ್ತು ವೆನ್ಲಾಕ್ ಆಸ್ಪತ್ರೆಯಲ್ಲಿ ಆರು ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ವಿಪರೀತ ಬಿಸಿಲಿನಿಂದ ಅಸ್ವಸ್ಥರಾದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತಿಮ್ಮಯ್ಯ ತಿಳಿಸಿದ್ದಾರೆ.
ಡಾ.ತಿಮ್ಮಯ್ಯ ಅವರು, “ಈ ವರ್ಷ, ದಕ್ಷಿಣ ಕನ್ನಡದಲ್ಲಿ ಬೇಸಿಗೆ ವಿಶೇಷವಾಗಿ ಕಠಿಣವಾಗಿದೆ. ಕೆಲವು ಪ್ರದೇಶಗಳಲ್ಲಿ, ತಾಪಮಾನವು ಸಾಮಾನ್ಯಕ್ಕಿಂತ ಐದು ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಇದು ದೇಹದ ಉಷ್ಣತೆಯ ಬದಲಾವಣೆಯಿಂದ ಅನಾರೋಗ್ಯಕ್ಕೆ ಕಾರಣವಾಗಬಹುದು. ಸಾರ್ವಜನಿಕರು ಅವುಗಳ ಬಗ್ಗೆ ಕಾಳಜಿ ವಹಿಸಬೇಕು. ಮಾನ್ಸೂನ್ ಪ್ರಾರಂಭವಾಗುವವರೆಗೆ ಆರೋಗ್ಯದ ಕುರಿತು ಕಾಳಜಿಯಿರಲಿ ಎಂದರು.
”ಜಿಲ್ಲೆಯಲ್ಲಿ ಅಧಿಕ ತಾಪಮಾನದಿಂದ ಚರ್ಮದ ಅಲರ್ಜಿ, ಸುಸ್ತು, ದೌರ್ಬಲ್ಯ, ಮೂರ್ಛೆ, ಕಾಲುಗಳಲ್ಲಿ ಊತ, ಚರ್ಮ ಹುಣ್ಣು, ಸ್ನಾಯು ಸೆಳೆತ, ತಲೆಸುತ್ತು, ವಾಂತಿ ಬರುವ ಸಾಧ್ಯತೆ ಇದೆ.
”ಜಿಲ್ಲೆಯಲ್ಲಿ ಇದುವರೆಗೆ ಬಿಸಿಲ ಝಳಕ್ಕೆ ತುತ್ತಾದ ಪ್ರಕರಣಗಳು ವರದಿಯಾಗಿಲ್ಲ.ಆದರೆ ಕೆಲವರು ಬೆವರು ಹುಣ್ಣು, ಕೈ ಊತ, ಆಯಾಸಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.ಸಾರ್ವಜನಿಕರ ಬಿಸಿಲಿಗೆ ಹೋಗುವುದನ್ನು ತಪ್ಪಿಸಬೇಕು. ಛತ್ರಿ ಒಯ್ಯುವುದು, ಸನ್ ಗ್ಲಾಸ್ ಧರಿಸುವುದು, ಮಜ್ಜಿಗೆ, ನೀರು, ಎಳನೀರು ಕುಡಿಯಬೇಕಾಗಿದೆ” ಎಂದು ಹೇಳಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನಚಂದ್ರ ಕುಲಾಲ್, ‘ಬೇಸಿಗೆಯಲ್ಲಿ ಅನೇಕರು ಮಂದಿ ನೀರು ಸಂಗ್ರಹಿಸುತ್ತಿದ್ದು, ಇದರಿಂದ ಸೊಳ್ಳೆ ಉತ್ಪತ್ತಿಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ಎಚ್ಚರಿಸಿದರು.