ಉಡುಪಿ: ಉಡುಪಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ಸ್ಕಾರ್ಫ್ ವಿವಾದದ ಕುರಿತು ಅತ್ಯಂತ ಪ್ರಚೋದನಕಾರಿ ಹೇಳಿಕೆ ನೀಡಿ ಕಾಲೇಜಿನ ಘನತೆಯನ್ನು ಹಾಳು ಮಾಡುತ್ತಿರುವ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಯಶ್ಫಾಲ್ ಸುವರ್ಣರನ್ನು ವಜಾಗೊಳಿಸಲು ಕೋರಿ ಇಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರಿಗೆ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಉಡುಪಿ ಜಿಲ್ಲಾ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.
ಯಶ್ಫಾಲ್ ಸುವರ್ಣ ತನ್ನ ಪ್ರಚೋದನಕಾರಿ ಹೇಳಿಕೆಯಲ್ಲಿ “ಕಾಲೇಜಿನಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ನಿಲ್ಲಿಸಲು ಹೆಚ್ಚು ಹೊತ್ತು ಬೇಕಾಗಿಲ್ಲ. ಹಿಂದುತ್ವ ಸಂಘಟನೆಗೆ ಐದು ನಿಮಿಷದ ಕೆಲಸ ಅಷ್ಟೇ” ಎಂಬ ಕೋಮು ಪ್ರಚೋದಕ ಮತ್ತು ಬೇಜಾಬ್ದಾರಿಯುತ ಹೇಳಿಕೆ ನೀಡಿದ್ದು ಇದು ಕಾಲೇಜಿನ ಘನತೆಗೆ ಧಕ್ಕೆ ತರುತ್ತದೆ. ಇಂತಹ ಪೂರ್ವಗ್ರಹ ಪೀಡಿತ ವ್ಯಕ್ತಿ ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾಗಿರುವುದು ಖೇದಕರವಾಗಿದೆ. ಕೂಡಲೇ ಇವರನ್ನು ಅಭಿವೃದ್ಧಿ ಸಮಿತಿಯಿಂದ ವಜಾಗೊಳಿಸಿ ಕಾಲೇಜಿನ ಘನತೆ ಮತ್ತು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಎಪಿಸಿಆರ್ ತನ್ನ ಮನವಿಯಲ್ಲಿ ಆಗ್ರಹಿಸಿದೆ.