ಉಡುಪಿ ಪತ್ರಿಕಾ ಭವನ ಪರಿಸರದಲ್ಲಿ ಪತ್ರಕರ್ತರಿಂದ ಡೆಂಗ್ಯು ಬಗ್ಗೆ ಜಾಗೃತಿ, ಲಾರ್ವ ಸಮೀಕ್ಷೆ

ಉಡುಪಿ, ಜು.12: ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಡೆಂಗ್ಯು ರೋಗ ಹರಡುವ ಈಡೀಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವ ದಿನದ ಪ್ರಯುಕ್ತ ಶುಕ್ರವಾರ ಉಡುಪಿ ಪತ್ರಿಕಾ ಭವನದ ಪರಿಸರದಲ್ಲಿ ಪತ್ರಕರ್ತರು ಲಾರ್ವ ಸಮೀಕ್ಷೆ ನಡೆಸಿ, ಲಾರ್ವಗಳನ್ನು ನಾಶ ಪಡಿಸಿ, ಸಾರ್ವಜನಿಕರಿಗೆ ಕರಪತ್ರಪ ವಿತರಿಸಿ ಡೆಂಗ್ಯು ಕಾಯಿಲೆ ಕುರಿತು ಅರಿವು ಮೂಡಿಸಲಾಯಿತು.

ಉಡುಪಿ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಾಣಾಧಿಕಾರಿ ಡಾ. ಪ್ರಶಾಂತ್ ಭಟ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಚಾಲನೆ ನೀಡಿದರು. ಕಳೆದ ವರ್ಷ ಈ ಪರಿಸರದಲ್ಲಿ ಡೆಂಗ್ಯು ಪ್ರಕರಣಗಳು ಹೆಚ್ಚಾಗಿ ಕಂಡುಬಂದ ಹಾಗೂ ಪ್ರಸ್ತುತ ಜಿಲ್ಲೆಯಲ್ಲಿ ಡೆಂಗ್ಯು ಪ್ರಕರಣಗಳ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು.

ಪತ್ರಕರ್ತರು ಪತ್ರಿಕಾ ಭವನದ ಸುತ್ತಮುತ್ತಲಿನ ರೆಡ್‌ಕ್ರಾಸ್ ಭವನ, ಕಾಮಗಾರಿ ನಡೆಯುತ್ತಿರುವ ಕಟ್ಟಡ ಹಾಗೂ ಮನೆಗಳಿಗೆ ತೆರಳಿ ಡೆಂಗ್ಯು ಹರಡುವ ಈಡೀಸ್ ಸೊಳ್ಳೆಯ ಲಾರ್ವಗಳನ್ನು ಸಮೀಕ್ಷೆ ಮಾಡಿದರು. ಹೂವಿನ ಕುಂಡ, ಅರೆಯುವ ಕಲ್ಲು, ಪ್ಲಾಸ್ಟಿಕ್ ಮುಚ್ಚಳಗಳಲ್ಲಿರುವ ನೀರಿನಲ್ಲಿ ಲಾರ್ವವನ್ನು ಪತ್ತೆ ಹಚ್ಚಿ ಬಳಿಕ ಅವುಗಳನ್ನು ನಾಶ ಪಡಿಸಲಾಯಿತು. ಇದೇ ವೇಳೆ ಮನೆಮಂದಿಗೆ ಕರಪತ್ರಗಳನ್ನು ವಿತರಿಸಿ, ನೀರು ನಿಲ್ಲದಂತೆ ನೋಡಿ ಕೊಳ್ಳಲು ಹಾಗೂ ಪರಿಸರವನ್ನು ಸ್ವಚ್ಛವಾಗಿ ಇಡುವಂತೆ ತಿಳಿಹೇಳಲಾಯಿತು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಕೀಟಶಾಸ್ತ್ರ ತಜ್ಞೆ ಮುಕ್ತ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಮಾಜಿ ಅಧ್ಯಕ್ಷ ಜಯಕರ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು

Latest Indian news

Popular Stories