ಉಡುಪಿ: ಕಳೆದ ಎರಡು ತಿಂಗಳಿಗಿಂತ ಅಧಿಕ ಸಮಯ ಸುರಿದ ಭಾರೀ ಮಳೆಯ ಕಾರಣಕ್ಕೆ ಉಡುಪಿಯ ಹಲವು ಮುಖ್ಯ ರಸ್ತೆಗಳು ತೀರಾ ಹದೆಗೆಟ್ಟಿದ್ದು ವಾಹನ ಸಂಚಾರಕ್ಕೆ ದುಸ್ತರವಾಗಿ ಪರಿಣಮಿಸಿದೆ.
ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ಫಾಲ್ ಸುವರ್ಣ ಅವರು ಸರಕಾರದ ಮುಂದೆ ಅನುದಾನಕ್ಕಾಗಿ ಪ್ರಬಲವಾದ ಮನವಿ ಮಂಡಿಸಿ ದುರಸ್ತಿ ಕಾರ್ಯ ನಡೆಸಬೇಕಾಗಿದೆ. ಉಸ್ತುವಾರಿ ಸಚಿವರು ಮತ್ತು ಶಾಸಕರು ಸಮನ್ವಯದೊಂದಿಗೆ ಜಿಲ್ಲೆಯ ಹಿತಾಸಕ್ತಿಯ ದೃಷ್ಟಿಯಿಂದ ಅಭಿವೃದ್ಧಿ ಕಾರ್ಯದ ಕಡೆ ಗಮನಕೊಡಬೇಕು. ಈಗಾಗಲೇ ಬ್ರಹ್ಮಗಿರಿ ಮುಖ್ಯ ರಸ್ತೆ, ಅಜ್ಜರಕಾಡು ರಸ್ತೆ, ಮಲ್ಪೆಯ ರಾಷ್ಟ್ರೀಯ ಹೆದ್ದಾರಿ, ಸಂತೆಕಟ್ಟೆ – ಕೆಮ್ಮಣ್ಣು ರಸ್ತೆ, ಮಲ್ಪೆ-ಗುಜ್ಜರ್ ಬೆಟ್ಟು ರಸ್ತೆ, ಅಂಬಾಗಿಲು-ಮಣಿಪಾಲ ರಸ್ತೆ, ಸಂತೆಕಟ್ಟೆ ಸರ್ವಿಸ್ ರೋಡ್ ಸೇರಿದಂತೆ ಹಲವು ಗ್ರಾಮದ ರಸ್ತೆಗಳು ತೀರಾ ಹದೆಗೆಟ್ಟು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.
ಕೇವಲ ಪರಿಶೀಲನೆಯ ಹೆಸರಿನಲ್ಲಿ ದಿನದೂಡದೆ ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಬೇಕಾಗಿದೆ.
ಶಾಸಕರು ಸರಕಾರವನ್ನು ದೂರುತ್ತಾ, ಉಸ್ತುವಾರಿ ಸಚಿವರು ಇನ್ನೇನೋ ಕಾರಣ ನೀಡುತ್ತಾ ಸಮಸ್ಯೆಗಳಿಂದ ಜಾರಿಕೊಳ್ಳದೆ ಸೂಕ್ತವಾಗಿ ಕ್ಷೇತ್ರದ ಸಮಸ್ಯೆಗಳನ್ನು ಅಧ್ಯಯನ ಮಾಡಿ ಸರಕಾರದ ಮುಂದಿಟ್ಟು ಅನುದಾನ ತಂದು ಆದಷ್ಟು ಶೀಘ್ರ ಪರಿಹಾರ ಕಂಡುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.