ಮಂಗಳೂರು | ಶಾಲಾ ಮಕ್ಕಳಿದ್ದ ರಿಕ್ಷಾಗೆ ಪಿಕಪ್‌ ಢಿಕ್ಕಿ: ಬಾಲಕಿ ಮೃತ್ಯು

ಮಂಗಳೂರು: ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ರಿಕ್ಷಾಗೆ ಪಿಕಪ್‌ ಢಿಕ್ಕಿಯಾಗಿ ಬಾಲಕಿ ಮೃತಪಟ್ಟ ಘಟನೆ ದೇರಳಕಟ್ಟೆಯ ಬೆಳ್ಮದ ಕಲ್ಪಾದೆ ಎಂಬಲ್ಲಿ ನಡೆದಿದೆ.

ಬಡಕಬೈಲು ನಿವಾಸಿ ಮಹಮ್ಮದ್‌ ಬ ಮೋನು ಮತ್ತು ಮುನ್ಝಿಯಾ ದಂಪತಿ ಪುತ್ರಿ ಆಯಿಷಾ ವಹಿಬಾ (11) ಮೃತ ವಿದ್ಯಾರ್ಥಿನಿ. ಬಾಲಕಿ ದೇರಳಕಟ್ಟೆಯ ನೇತಾಜಿ ಶಾಲೆಯ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.


ಮದಕ ಭಾಗದಿಂದ ದೇರಳಕಟ್ಟೆ ನೇತಾಜಿ ಶಾಲೆಗೆ ಮಕ್ಕಳನ್ನು ಕರೆತರುವ ರಿಕ್ಷಾ ಕಲ್ಪಾದೆ ತಲುಪುತ್ತಿದ್ದಂತೆ ಎದುರಿನಿಂದ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಪಿಕಪ್‌ ವಾಹನ ಢಿಕ್ಕಿ ಹೊಡೆದಿದೆ.


ಪರಿಣಾಮ ಆಯಿಷಾ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.


ರಿಕ್ಷಾದಲ್ಲಿದ್ದ ಇತರ ನಾಲ್ವರು ವಿದ್ಯಾರ್ಥಿಗಳು ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ. ರಿಕ್ಷಾ ಚಾಲಕನಿಗೂ ಗಾಯವಾಗಿದೆ. ಗಾಯಾಳುಗಳನ್ನು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿನಿ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ದೇರಳಕಟ್ಟೆ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರಜೆ ಸಾರಲಾಗಿದೆ.

Latest Indian news

Popular Stories