ಉ.ಕ: ಹುಲಿ ಹತ್ಯೆಗೈದವರ ಬಂಧನ

ಕಾರವಾರ: ಕಳೆದ ಎರಡು ವರ್ಷಗಳ ಹಿಂದೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಗೆ ಸಮಿಪ ಭರ್ಚಿ ವಲಯ ವ್ಯಾಪ್ತಿಯಲ್ಲಿ ನಡೆದಿದ್ದ ಹುಲಿ ಹತ್ಯೆಯ ಘಟನೆಗೆ ಸಂಬಂಧಪಟ್ಟಂತೆ ಅರಣ್ಯ ಅಧಿಕಾರಿಗಳು ಬೆಳಗಾವಿಯ ಮೂಲದ ಪ್ರಭಾವಿ ವ್ಯಕ್ತಿ ಓರ್ವನನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮತ್ತೋರ್ವನನ್ನ ವಿಚಾರಣೆ ನಡೆಸಲಾಗುತ್ತಿದ್ದು, ಇನ್ನೂ ಮೂವರು ತಲೆ ಮರೆಸಿಕೊಂಡಿದ್ದಾರೆ.

2022ರ ಡಿಸೆಂಬರ್ 18ರಂದು ದಾಂಡೇಲಿಗೆ ಸಮೀಪದ ಭರ್ಚಿ ಅರಣ್ಯ ವ್ಯಾಪ್ತಿಯಲ್ಲಿ ಹುಲಿ ಹತ್ಯೆ ಮಾಡಿದ ಘಟನೆ ನಡೆದಿತ್ತು. ಇದಕ್ಕೆ ಸಂಬಂಧಪಟ್ಟಂತೆ ಅರಣ್ಯ ಅಧಿಕಾರಿಗಳು ಹಲವು ದಿಕ್ಕುಗಳಿಂದ ತನಿಖೆ ನಡೆಸಿದ್ದರು. ಸಿಸಿ ಕ್ಯಾಮೆರಾ ಹಾಗೂ ಮೊಬೈಲ್ ಟವರ್ ಮಾಹಿತಿ ಆಧರಿಸಿ ತನಿಖೆ ಮಾಡಿ, ಬೆಳಗಾವಿಯ ಅತ್ತಿವಾಡದ ಸೋಮನಾಥ್ ಪಾಟೀಲ್ ನನ್ನು ಬಂಧಿಸಿದ್ದಾರೆ. ಜಗಲಪೇಟ ಅರಣ್ಯ ಅಧಿಕಾರಿಗಳು ಸೋಮನಾಥನನ್ನು ವಿಚಾರಣೆ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಮತ್ತೋರ್ವ ಶಂಕಿತ ಆರೋಪಿ ಬೆಳಗಾವಿಯ ತಾನಾಜಿಗಲ್ಲಿಯ ಇಂದ್ರಜಿತ್ ಗಸರಿ ಎಂಬಾತನನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ತಲೆ ಮರೆಸಿಕೊಂಡವರ ಬಂಧನಕ್ಕಾಗಿ ಕಾರ್ಯಚರಣೆ ನಡೆಸಲಾಗುತ್ತಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಹೋಂ ಸ್ಟೇ ಮಾಲಕನನ್ನು ಸಹ ಅರಣ್ಯಾಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ . ಹುಲಿ ಬೇಟೆಯಾಡಿದ ಆರೋಪಿಗಳು ಹೋಂ ಸ್ಟೇಯಲ್ಲಿ ವಾಸ್ತವ್ಯ ಇದ್ದ ಬಗ್ಗೆ ತನಿಖೆ ನಡೆಯುತ್ತಿದೆ.‌

ಜಗಲಪೇಟ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ವಲಯ ಅರಣ್ಯಾಧಿಕಾರಿಗಳು ಹುಲಿ ಹತ್ಯೆ ಪ್ರಕರಣದ ತನಿಖೆ ತೀವ್ರ ಗೊಳಿಸಿದ್ದಾರೆ.
….

Latest Indian news

Popular Stories