ಮಂಗಳೂರು: ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಇಲ್ಲಿಗೆ ಬಂದವನು. ಬಿಜೆಪಿಯಲ್ಲಿ ಕಾರ್ಯಕರ್ತ ಎನ್ನುವುದೇ ದೊಡ್ಡದಾದ ಸ್ಥಾನ. ಆದರೆ ನಾನು ನನಗೆ ಅಧಿಕಾರ ಸಿಗಬೇಕೆಂದು ಇನ್ನೊಬ್ಬರನ್ನು ಮುಗಿಸಿಲ್ಲ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಪಕ್ಷದಲ್ಲಿ ಯಾವುದೇ ಹುದ್ದೆಗಳನ್ನು ಕೇಳಿ ಪಡೆದಿಲ್ಲ. ನಿಷ್ಠಾವಂತ ಕಾರ್ಯಕರ್ತರನ್ನು ಬಿಜೆಪಿ ಎಂದೂ ಗುರುತಿಸುತ್ತದೆ. ಅವರನ್ನು ಕರೆದು ಹುದ್ದೆಯನ್ನೂ ನೀಡುತ್ತದೆ. ನಾನು ಯಾವುದೇ ಹುದ್ದೆಗೆ ಅರ್ಜಿ ಹಾಕಿಲ್ಲ. ಪಕ್ಷವೇ ನನ್ನನ್ನು ಕರೆದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯನ್ನು ನೀಡಿದೆ ಎಂದು ಹೇಳಿದರು.
ಪಕ್ಷ ನನ್ನಲ್ಲಿ ಕಚೇರಿಯ ಕಸ ಗುಡಿಸಲು ಹೇಳಿದರೂ ನಾನು ಮಾಡುತ್ತೇನೆ. ಪಕ್ಷ ಕಟ್ಟಲು ಹೇಳಿದರೆ ಅದನ್ನೂ ಮಾಡುತ್ತೇನೆ. ಹೊರತು ನಾನು ಯಾವುದೇ ಹುದ್ದೆಯ ಆಕಾಂಕ್ಷಿ ಅಲ್ಲ ಎಂದು ಅವರು ವಿಧಾನ ಪರಿಷತ್ ಸದಸ್ಯ ಅಕಾಂಕ್ಷಿ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.