ನಾಡಹಬ್ಬಕ್ಕೆ ಇಂದು ಮೈಸೂರಿನಲ್ಲಿ ಸಾಹಿತಿ ಹಂಪ ನಾಗರಾಜಯ್ಯ ಅದ್ದೂರಿ ಚಾಲನೆ: ನಾಡಿನೆಲ್ಲೆಡೆ ದಸರಾ ಸಂಭ್ರಮ ಆರಂಭ

ಬೆಂಗಳೂರು/ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು 10 ದಿನಗಳ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸಜ್ಜಾಗಿದ್ದು, ಇಂದು ಗುರುವಾರ ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆಗೊಳ್ಳಲಿದೆ.

ಕಳೆದ ವರ್ಷ ಭೀಕರ ಬರಗಾಲದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸರಳ ಮಟ್ಟದಲ್ಲಿ ಆಚರಣೆಗೆ ಮುಂದಾಗಿತ್ತು. ಆದರೆ, ಈ ವರ್ಷ ರಾಜ್ಯಾದ್ಯಂತ ಸಾಕಷ್ಟು ಮಳೆಯಿಂದ ಜಲಾಶಯಗಳು ತುಂಬಿದ ನಂತರ ಸರ್ಕಾರವು ಅದ್ಧೂರಿ ಉತ್ಸವಗಳನ್ನು ಘೋಷಿಸಿದ್ದು, ಪರಿಸ್ಥಿತಿ ಉತ್ತಮವಾಗಿ ಬದಲಾಗಿವೆ.

ರಾಜ್ಯ ಸರ್ಕಾರವು ಕಾರ್ಪೊರೇಟ್ ಸಂಸ್ಥೆಗಳ ಪ್ರಾಯೋಜಕತ್ವದ ಹೊರತಾಗಿ ಆಚರಣೆಗೆ 40 ಕೋಟಿ ರೂಪಾಯಿ ಈ ಬಾರಿ ಖರ್ಚು ಮಾಡುತ್ತಿದೆ. ಇಂದು ಬೆಳಗ್ಗೆ 9:15 ರಿಂದ 9:45 ರ ನಡುವಿನ ವೃಶ್ಚಿಕ ಲಗ್ನದಲ್ಲಿ ಖ್ಯಾತ ಸಾಹಿತಿ ಮತ್ತು ವಿದ್ವಾಂಸ ಹಂಪ ನಾಗರಾಜಯ್ಯ ಅವರು ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ದಸರಾ ಉತ್ಸವವನ್ನು ಉದ್ಘಾಟಿಸಲಿದ್ದಾರೆ.ಈಗಾಗಲೇ ಚಾಮುಂಡೇಶ್ವರಿ ದೇವಸ್ಥಾನದ ಪಕ್ಕದಲ್ಲಿ ಬೃಹತ್ ಜರ್ಮನ್ ಟೆಂಟ್ ಅಳವಡಿಸಲಾಗಿದ್ದು 2 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಈಗಾಗಲೇ ತಾಯಿ ಚಾಮುಂಡಿ ಉತ್ಸವ ಮೂರ್ತಿ ಶುದ್ಧೀಕರಣ ಮಾಡಲಾಗಿದ್ದು ಕೆಂಪು ಬಣ್ಣದ ಸೀರೆಯಲ್ಲಿ ತಾಯಿ ಕಂಗೋಳಿಸುತ್ತಿದ್ದಾಳೆ. ಬೆಳಿಗ್ಗೆ ತಾಯಿ ಚಾಮುಂಡೇಶ್ವರಿಗೆ ವಿವಿಧ ಅಭಿಷೇಕ ಮಾಡಿದ ಬಳಿಕ ವಿಶೇಷ ಅಲಂಕಾರ ಮಾಡಿ ಪೂಜಾ ಕೈಂಕರ್ಯಗಳನ್ನ ಮಾಡಲಾಗುತ್ತದೆ. ಈ ಮೂಲಕ ಚಾಮುಂಡಿ ತಾಯಿಯ ಸನ್ನಿಧಿಯಲ್ಲಿ ದಸರಾದ ಧಾರ್ಮಿಕ ಕಾರ್ಯಗಳು ಆರಂಭವಾಗುತ್ತದೆ.

ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮೈಸೂರು ಜಿಲ್ಲಾ ಸಚಿವ ಡಾ.ಎಚ್.ಸಿ.ಮಹದೇವಪ್ಪ, ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಮತ್ತಿತರರು ಉಪಸ್ಥಿತರಿರುತ್ತಾರೆ.

ದಸರಾ ಸಂಗೀತೋತ್ಸವ: ಮೈಸೂರು ಅರಮನೆ ಮುಂಭಾಗದ ದಸರಾ ಸಂಗೀತೋತ್ಸವ ಸೇರಿದಂತೆ ಹತ್ತಕ್ಕೂ ಹೆಚ್ಚು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ನಡೆಯಲಿವೆ. ದಸರಾ ಚಲನಚಿತ್ರೋತ್ಸವ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ದಸರಾ ಕುಸ್ತಿ ಸ್ಪರ್ಧೆ, ದಸರಾ ಕ್ರೀಡೆಗಳು, ಪುಸ್ತಕೋತ್ಸವ, ನವರಾತ್ರಿ ಜಾನಪದ ರಂಗೋತ್ಸವ ಮತ್ತು ದಸರಾ ವಸ್ತುಪ್ರದರ್ಶನ ಸೇರಿದಂತೆ ಇತರ ಕಾರ್ಯಕ್ರಮಗಳು ಒಳಗೊಂಡಿರುತ್ತವೆ.

ಈ ವರ್ಷ ಯುವ ದಸರಾದಲ್ಲಿ ಮೊದಲ ಬಾರಿಗೆ ಸಂಗೀತ ಮಾಂತ್ರಿಕರಾದ ಇಳಯರಾಜ ಮತ್ತು ಎಆರ್ ರೆಹಮಾನ್ ಕಾರ್ಯಕ್ರಮ ನೀಡಲಿದ್ದಾರೆ.

ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರತ್ನಖಚಿತ ಚಿನ್ನದ ಸಿಂಹಾಸನವನ್ನು ಏರುವ ಮತ್ತು ಸಾಂಪ್ರದಾಯಿಕ ಪೂಜೆಗಳನ್ನು ನೆರವೇರಿಸುವ ಮೂಲಕ ಅರಮನೆಯಲ್ಲಿ ಖಾಸಗಿ ದರ್ಬಾರ್‌ನತ್ತ ಎಲ್ಲರ ಕಣ್ಣು ನೆಟ್ಟಿದೆ. ಸಂಸದರಾದ ನಂತರ ಯದುವೀರ್ ಅವರಿಗೆ ಇದು ಮೊದಲ ಖಾಸಗಿ ದರ್ಬಾರ್ ಆಗಿದೆ.

ವಿಜಯದಶಮಿ ದಿನದಂದು ಜಂಬೂ ಸವಾರಿಯೊಂದಿಗೆ ದಸರಾ ಉತ್ಸವವು ಮುಕ್ತಾಯಗೊಳ್ಳಲಿದೆ.

Latest Indian news

Popular Stories