ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಚ್ಯುತಿ ಆಗುತ್ತಿದೆ. ಕ್ರೈಸ್ತರು, ಮುಸ್ಲಿಮರ ಮೇಲೆ ವ್ಯಾಪಕ ದಾಳಿ ಆಗುತ್ತಿದೆ ಎಂದು ಅಮೆರಿಕ ಧಾರ್ಮಿಕ ಆಯೋಗದ ವರದಿ ನೀಡಿದೆ. ಇದನ್ನು ಭಾರತ ತಿರಸ್ಕಾರ ಮಾಡಿದೆ.
ಭಾರತದಲ್ಲಿನ ಧಾರ್ಮಿಕ ಸ್ವಾತಂತ್ಯದ ಕುರಿತು ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕಸ್ವಾತಂತ್ರ್ಯ ಆಯೋಗ ವರದಿ ಬಿಡುಗಡೆ ಮಾಡಿದ್ದು, ‘ಭಾರತ ದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ ಹೆಚ್ಚಾಗಿದೆ’ ಎಂದು ಹೇಳಿದೆ.
ಅ.2ರಂದು ಬಿಡುಗಡೆ ಯಾದ ವರದಿಯಲ್ಲಿ ‘ಚುನಾವಣೆ ಸಂದರ್ಭದಲ್ಲಿ ನಾಯಕರು ನೀಡುವ ಪ್ರಚೋದನಕಾರಿ ಹೇಳಿಕೆಮತ್ತು ಸರ್ಕಾರದ ಕೆಲ ನೀತಿಗಳು ದೇಶದ ಮುಸ್ಲಿಮರು ಮತ್ತು ಕ್ರೈಸ್ತ ಮೇಲೆ ನಡೆಯುತ್ತಿ ರುವ ದಾಳಿಗಳನ್ನು ಪ್ರಚೋದಿಸುತ್ತಿವೆ’ ಎಂದು ಹೇಳಲಾಗಿದೆ. ‘2024ರ ಜನವರಿಯಿಂದ ಮಾರ್ಚ್ ನಡುವೆ ಕ್ರಿಶ್ಚಿಯನ್ನರ ಮೇಲೆ ನಡೆದ 161 ದಾಳಿಗಳನ್ನು ಉಲ್ಲೇಖಿಸಲಾಗಿದೆ. ಅಂತೆಯೇ ಬಲವಂತ ಮತಾಂತರದ ಆರೋಪದ ಮೇಲೆ ಕ್ರಿಶ್ಚಿಯನ್ನರನ್ನು ಬಂಧಿಸಲಾಗಿದೆ’ ಎಂದು ಆರೋಪಿಸಲಾಗಿದೆ.
‘ಚುನಾವಣಾ ಫಲಿತಾಂಶ ಘೋಷಣೆ ಬಳಿಕ ಮುಸ್ಲಿಮರನ್ನು ಗುರಿಯಾಗಿಸಿ 28 ದಾಳಿ ನಡೆದಿವೆ. ಅದಕ್ಕೂ ಮುನ್ನ ರಾಜಕಾರಣಿಗಳು ಮುಸ್ಲಿಂ ಮತ್ತು ಇತರೆ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಭಾಷಣ ಮಾಡಿದ್ದರು. ಕಾಂಗ್ರೆಸ್ ಗೆದ್ದರೆ ಹಿಂದೂ ಧರ್ಮ ಅಳಿಸಿಹಾಕುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು ಹಾಗೂ ಕಾಂಗ್ರೆಸ್ ಜಯಿಸಿದರೆ ಶರಿಯಾ ಕಾನೂನು ಜಾರಿ ಅಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಸಿದ್ದರು’ ಎಂದು ವರದಿ ಹೇಳಿದೆ. ಇದಲ್ಲದೆ ವಕ್ಸ್ ತಿದ್ದುಪಡಿ ಕಾಯ್ದೆಯನ್ನೂ ವರದಿಯಲ್ಲಿ ಖಂಡಿಸಲಾಗಿದೆ.
ಭಾರತದ ಹೇಳಿಕೆ: ಅಮೆರಿಕ ಆಯೋಗವೊಂದು ಬಿಡುಗಡೆ ಮಾಡಿರುವ ಭಾರತದ ಧಾರ್ಮಿಕ ಸ್ವಾತಂತ್ರ್ಯ ವರದಿಯನ್ನು ವಿದೇಶಾಂಗ ಇಲಾಖೆಯ ಖಂಡಿಸಿದ್ದು, ‘ಈ ಆಯೋಗ ಪಕ್ಷಪಾತಿ ಆಗಿದೆ ಹಾಗೂ ವರದಿ ದುರುದ್ದೇಶದಿಂದ ಕೂಡಿದೆ. ಅದು ದೇಶದ ಚುನಾವಣೆಗಳಲ್ಲಿ ಮೂಗು ತೂರಿಸುತ್ತಿದೆ’ ಎಂದು ಆರೋಪಿಸಿದೆ. ವಕ್ತಾರ ರಣಧೀರ್ ಜೈಸ್ವಾಲ್ ಹೇಳಿಕೆ ನೀಡಿ ವರದಿಯ ನೆಪದಲ್ಲಿ ಭಾರತದಲ್ಲಿ ತನ್ನ ಸಿದ್ಧಾಂತದ ಪ್ರಚಾರವನ್ನು ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಮುಂದುವರಿಸಿದೆ. ಭಾತರದ ವೈವಿಧ್ಯಮಯ, ಬಹುತ್ವ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಆಯೋಗ ಅರ್ಥೈಸಿಕೊಳ್ಳುತ್ತದೆ ಎಂಬ ಯಾವುದೇ ನಿರೀಕ್ಷೆಯಿಲ್ಲ. ವಿಶ್ವದ ಅತಿದೊಡ್ಡ ಚುನಾವಣಾ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವ ಅವರ ಪ್ರಯತ್ನಗಳು ವಿಫಲವಾಗುತ್ತವೆ’ ಎಂದು ಹೇಳಿದ್ದಾರೆ.
“ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (USCIRF) ಕುರಿತು ನಮ್ಮ ಅಭಿಪ್ರಾಯಗಳು ಚೆನ್ನಾಗಿ ತಿಳಿದಿವೆ. ಇದು ರಾಜಕೀಯ ಅಜೆಂಡಾದೊಂದಿಗೆ ಪಕ್ಷಪಾತಿ ಸಂಘಟನೆಯಾಗಿದೆ. ಇದು ಸತ್ಯಗಳನ್ನು ತಪ್ಪಾಗಿ ಪ್ರತಿನಿಧಿಸುವುದನ್ನು ಮುಂದುವರೆಸಿದೆ ಮತ್ತು ಭಾರತದ ಬಗ್ಗೆ ಪ್ರೇರಿತ ನಿರೂಪಣೆಯನ್ನು ನೀಡುತ್ತಿದೆ, ”ಎಂದು ರಣಧೀರ್ ಜೈಸ್ವಾಲ್ ಹೇಳಿದ್ದಾರೆ.