ಕಾರವಾರ : ರಾಷ್ಟ್ರೀಯ ಹೆದ್ದಾರಿ ಶಿರೂರು ಬಳಿ ಭೂ ಕುಸಿತದ ಪ್ರಕರಣದಲ್ಲಿ ನದಿಗೆ ಬಿದ್ದಿದ್ದ ಹೆಚ್.ಪಿ ಗ್ಯಾಸ್ ಟ್ಯಾಂಕರ್ ನಿಂದ ಗ್ಯಾಸ್ ಹೊರಕ್ಕೆ ತೆಗೆಯುವ ಕ್ರಿಯೆಯನ್ನು ಎಚ್ ಪಿ ಸಿಎಲ್ ತಜ್ಞರು ಗುರುವಾರ ಪ್ರಾರಂಭಿಸಿದ್ದು, ಶುಕ್ರವಾರ ಸಹ ಮುಂದುವರಿದಿದೆ. ಮೊದಲ ದಿನ
ಗ್ಯಾಸ್ ಟ್ಯಾಂಕರ್ ನಲ್ಲಿದ್ದ 16 ಟನ್ ಗ್ಯಾಸ್ ಹೊರಕ್ಕೆ ತೆಗೆಯಲಾಯಿತು. ನದಿ ನೀರು ಹಾಗೂ ಹೊರ ಪರಿಸರಕ್ಕೆ ವೈಜ್ಞಾನಿಕವಾಗಿ ಬಿಡಲಾಗಿತ್ತು.
ಈಗ ಟ್ಯಾಂಕರ್ ನಲ್ಲಿದ್ದ ಶೇ.60 ರಷ್ಟು ಪ್ರಮಾಣದ ಗ್ಯಾಸ್ ಮಾತ್ರ ನದಿ ನೀರಿಗೆ ಬಿಡಲಾಗಿದೆ ಎಂದು ಹೆಚ್.ಪಿ ಕಂಪೆನಿ ಮೂಲಗಳು ತಿಳಿಸಿವೆ.
ಗ್ಯಾಸ್ ನ್ನು ಟ್ಯಾಂಕರ್ ನಿಂದ ತೆಗೆಯುವ ವೇಳೆ ಮುಂಜಾಗ್ರತಾ ಕ್ರಮವಾಗಿ ಸಗಡಗೇರಿ ಗ್ರಾಮದ ನದಿ ದಂಡೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ,ಎಸ್.ಡಿ.ಆರ್.ಎಫ್., ಎನ್.ಡಿ.ಆರ್.ಎಫ್ ಸಿಬ್ಬಂದಿ , ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಯ ಸಿಬ್ಬಂದಿ, ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ.
ಗ್ಯಾಸ್ ಮೀಟರ್ ಮಾಪನದ ಮೂಲಕ ಅಳೆದು ಗ್ಯಾಸ್ ನನ್ನು ಗಂಗಾವಳಿ ನದಿಗೆ ಹಂತ ಹಂತವಾಗಿ ಸಣ್ಣ ಸಣ್ಣ ಪ್ರಮಾಣದಲ್ಲಿ ಬಿಡಲಾಗುತ್ತಿದೆ. ಗ್ಯಾಸ್ ನನ್ನು ಕೆಲ ಭಾಗ ನದಿಗೆ, ಕೆಲ ಭಾಗ ಗಾಳಿಗೆ ಬಿಡಲಾಯಿತು.
ಮುನ್ನೆಚ್ಚರಿಕಾ ಕ್ರಮವಾಗಿ ಸಗಡಗೇರಿ ಗ್ರಾಮದ ಜನರನ್ನು ಬೇರೆಡೆಗೆ ಜಿಲ್ಲಾಡಳಿತ ಸ್ಥಳಾಂತರಿಸಿತ್ತು. ಸಗಡಗೇರಿ, ಬೆಳಸೆಯ ಒಟ್ಟು
34 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಗುರುವಾರವೇ ಕಳುಹಿಸಲಾಗಿದೆ. ಈಗಾಗಲೇ ಟ್ಯಾಂಕರನ್ನು ದಡಕ್ಕೆ ಎಳೆದು ತರಲಾಗಿದೆ. ಅಲ್ಪ ಪ್ರಮಾಣದ ಗ್ಯಾಸ್ ಟ್ಯಾಂಕರ್ ನಲ್ಲಿದ್ದು, ಅದನ್ನ ಸಹ ಖಾಲಿ ಮಾಡುವ ಕ್ರಿಯೆ ನಡೆದಿದೆ.
…..