ಉಡುಪಿ/ಮಂಗಳೂರು: ಕರಾವಳಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ನದಿಯ ನೀರು ತುಂಬಿ ಹರಿಯುತ್ತಿದ್ದು ನೆರೆಯ ಪರಿಸ್ಥಿತಿ ನಿರ್ಮಾಣವಾಗಿದೆ.
ಮೋರಿ ಕುಸಿತ:
ಶಿರೂರು ಹೊಸೂರಿನ ಅತ್ತಿಕೇರೆ ಗ್ರಾಮದಲ್ಲಿ ಮೋರಿ ಕುಸಿತಗೊಂಡು ಸಂಪರ್ಕಕ್ಕೆ ತಡೆಯಾಗಿದೆ. ಶಿರೂರು ಭಾಗದಲ್ಲಿ ಮನೆ,ತೋಟಗಳಿಗೆ ನೀರು ನುಗ್ಗಿದೆ.
ಆಲದ ಮರ ನೆಲಕ್ಕೆ!
ಮೂಡಬಿದರೆಯ ರಾಷ್ಟೀಯ ಹೆದ್ದಾರಿ 169 ಹಾದು ಹೋಗುವ ತೋಡಾರು ಜಂಕ್ಷನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಗಾಳಿಗೆ ಆಲದಮರವೊಂದು ಬುಡಸಮೇತ ಧರೆಗುರುಳಿ ಅಡಿಯಲ್ಲಿದ್ದ ಹಣ್ಣಿನ ಅಂಗಡಿ ಸಂಪೂರ್ಣ ಜಖಂಗೊಂಡಿದೆ.
ಟ್ರಾಫಿಕ್ ಜಾಮ್:
ಇನ್ನೂ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯು ಕಲ್ಲಡ್ಕ ಬಳಿ ಟ್ರಾಫಿಕ್ ಜಾಮ್ ಆಗಿದ್ದು ವಾಹನ ಸವಾರರು ಪರದಾಡುವಂತಾಗಿದೆ.
ಕರಾವಳಿಯಲ್ಲಿ ಜುಲೈ 8,9 ರೆಡ್ ಅಲರ್ಟ್ ಘೋಷಿಸಲಾಗಿದ್ದು ಭಾರೀ ಮಳೆಯಾಗುವ ಕುರಿತು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜಿಗೆ ಎರಡು ದಿನ ಜಿಲ್ಲಾಡಳಿತ ರಜೆ ಘೋಷಿಸಿದೆ.