ಉಡುಪಿ:ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿಗಳು ಜಾಮೀನಿಂದ ಬಿಡುಗಡೆಯಾಗಿ ಬಂದ ಸಂದರ್ಭದಲ್ಲಿ ಅವರನ್ನು ಹಿಂದುತ್ವವಾದಿ ಸಂಘಟನೆಗಳು ಸನ್ಮಾನಿಸಿದ ಘಟನೆಯನ್ನು ಖಂಡಿಸಿ ಉಡುಪಿಯ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಸಾಮಾಜಿಕ ಹೋರಾಟಗಾರ ಇದ್ರಿಸ್ ಹೂಡೆ ಮಾತನಾಡಿ,ಧೀಮಂತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿಗಳನ್ನು ಧೀರ ಯೋಧರಂತೆ ಸನ್ಮಾನಿಸಿದ್ದನ್ನು ಖಂಡಿಸಿ ಈ ಪ್ರತಿಭಟನೆ ನಡೆಯುತ್ತಿದೆ. ಕಂಡದ್ದು ಕಂಡಂತೆ ಹೇಳಿದರೆ ಕೆಂಡದಂತೆ ಕೋಪ ಗಾದೆಯಂತೆ ಗೌರಿ ಕಂಡದ್ದನ್ನು ಹೇಳಿದಾಗ ಅವರಿಗೆ ನೋಡಲು ಸಾಧ್ಯವಾಗದೆ ಹತ್ಯೆ ಮಾಡಿದರು. ದೇಶದ ಪರ ಮಾತನಾಡಿದಾಗ ಅವರಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ಪ್ರತಿಗಾಮಿ ಶಕ್ತಿಗಳು ರಾಷ್ಟ್ರ ಭಕ್ತಿಯ ಹೆಸರಿನಲ್ಲಿ ರಾಷ್ಟ್ರದ್ರೋಹದ ಕೆಲಸ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ದೇಶದಲ್ಲಿ ಬಿಲ್ಕೀಸ್ ಬಾನು ಕುಟುಂಬ ಸದಸ್ಯರನ್ನು ಕೊಲೆ ಮಾಡಿ, ಸ್ವತಃ ಅವರ ಮೇಲೆ ಅತ್ಯಾಚಾರ ಮಾಡಿ ಜೈಲಿಗೆ ಹೋದವರು ಬಿಡುಗಡೆಗೊಂಡಾಗ ಸನ್ಮಾನಿಸಲಾಗುತ್ತದೆ. ಏನು ಅಪರಾಧ ಮಾಡದವರನ್ನು ಯುಎಪಿಎ ಕಾಯಿದೆಯಡಿ ಹಾಕಿ ಜೈಲಿನಲ್ಲಿ ಹಾಕಲಾಗುತ್ತದೆ. ಮಸೀದಿಯೊಳಗೆ ಹೋಗಿ ಜೈ ಶ್ರೀರಾಮ್ ಹೇಳಿದರೆ ತಪ್ಪಲ್ಲ ಎಂದು ನ್ಯಾಯಾಲಯ ತೀರ್ಪುಕೊಡುತ್ತದೆ ಈ ಎಲ್ಲ ಬೆಳವಣಿಗೆ ಕಳವಳಕಾರಿಯಾಗಿದೆ ಎಂದರು.
ಗೌರಿ ಜಾತ್ಯಾತೀತ ಪರಂಪರೆಯನ್ನು ಎತ್ತಿ ಹಿಡಿದು ಹೋರಾಟ ಮಾಡಿದ್ರು ಅದನ್ನು ನೋಡಲಾಗದ ಶಕ್ತಿಗಳು ಅವರನ್ನು ಕೊಲೆ ಮಾಡಿದರು. ಸತ್ಯದ, ನ್ಯಾಯದ ದನಿಯಾಗುವವರ ನೇಲೆ ದನಮಕಾರಿ ಕೃತ್ಯಗಳು ಮುಂದುವರಿದಿದೆ. ಮಾನವೀಯ ಮೌಲ್ಯಕ್ಕೆ ಕಳಂಕ ತರುವ ಕೆಲಸ ಮಾಡಲಾಗಿದೆ. ಗೌರಿ ಲಂಕೇಶ್ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಪ್ರೊ.ಫಣಿರಾಜ್, ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ವರ್ಷ ವಿಚಾರಣೆ ನಡೆದಿದೆ, ಆದರೆ ಯಾರಿಗೂ ಇದುವರೆಗೆ ಶಿಕ್ಷೆಯಾಗಿಲ್ಲ. ಇಲ್ಲಿಯವರೆಗೆ 18 ಜನ ಆರೋಪಿಗಳಿಗೆ ಜಾಮೀನು ದೊರಕಿದೆ. ಈ ಆರೋಪಿಗಳಿಗೆ ಮಾಜಿ ಸಂಸದ ಸೌಹರ್ದ ಭೇಟಿಯಾಗುತ್ತಾನೆ. ಇನ್ನೋರ್ವ ಆರೋಪಿಯನ್ನು ಶಿವಸೇನೆ ಶಿಂಧೆ ಬಣದವರು ಪಕ್ಷ ಸೇರ್ಪಡಿಸಲು ಪ್ರಯತ್ನ ನಡೆಸುತ್ತಾರೆ.
ವಿಜಯಪುರದಲ್ಲಿ ಹಿಂದುತ್ವವಾದಿ ಸಂಘಟನೆಗಳು ಅದ್ದೂರಿಯಾಗಿ ಕರೆದುಕೊಂಡು ಹೋಗಿ ಆರೋಪಿಗಳನ್ನು ಸನ್ಮಾನಿಸುತ್ತಾರೆ. ಆದರೂ ವಿಜಯಪುರ ಪೊಲೀಸರು, ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುವುದು ಖೇದಕರ.ಈ ಸನ್ಮಾನದಿಂದ ಸಮಾಜದ ಮೇಲಾಗುವ ಪರಿಣಾಮದ ಕುರಿತು ಸರಕಾರಕ್ಕೆ ಪೊಲೀಸ್ ಇಲಾಖೆಗೆ ಅರಿವಿರಬೇಕು. ಉಡುಪಿ ಶಾಸಕರು ಎಲ್ಲವನ್ನು ಅಂತರಾಷ್ಟ್ರೀಯ ಪಿತೂರಿ ಎಂದು, ಎನ್.ಐ.ಎ ತನಿಖೆ ಮಾಡಬೇಕೆಂದು ಮಾತನಾಡುತ್ತಾರೆ. ಇಂತಹ ಘಟನೆಯ ಕುರಿತು ಯಾಕೆ ಮೌನ ಎಂದು ಪ್ರಶ್ನಿಸಿದರು.
ರಂಗಕರ್ಮಿ ನಾಗೇಶ್ ಉದ್ಯಾವರ ಮಾತನಾಡಿ, ಇಂತಹ ಪ್ರತಿಭಟನೆ ಆಯೋಜನೆ ಮಾಡಬೇಕಾದ ಅವಕಾಶ ಕಲ್ಪಿಸಿದ ಸ್ಥಿತಿಯೇ ಹೇಯ. ಕೊಲೆಗಡುಕರಿಗೆ ಸನ್ಮಾನಿಸುವ ಸಂದರ್ಭ ಸೃಷ್ಟಿಯಾಗಿದೆ ಎಂಬುವುದೇ ಪ್ರಜಾಪ್ರಭುತ್ವಕ್ಕೆ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಬದುಕು ಚಿಂತಿಸಲು, ರೂಪಿಸಲು ಇದ್ದ ಶಿಕ್ಷಕರ ದಿನಾಚರಣೆಯ ದಿನವಾದ 2005 ಸೆ. 5 ರಂದು ಭೀಕರ ಘಟನೆ ನಡೆಯುತ್ತದೆ. ಈ ದೇಶದ ಸೌಹರ್ದತೆ, ಜತ್ಯಾತೀತೆ ಕುರಿತು ಧ್ವನಿಯಾಗಿದ್ದ ಗೌರಿ ಲಂಕೇಶ್ ನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.ಆಕೆ ಜಾತ್ಯತೀತತೆ, ಸೌಹದರ್ತೆಗಾಗಿ ಲೇಖನ ಬರೆದ ಕಾರಣ ಅವರನ್ನು ಕೊಲೆ ಮಾಡಲಾಗಿತ್ತು. ಇತ್ತೀಚೆಗೆ ಜಾಮೀನು ಮೇಲೆ ಆರೋಪಿಗಳನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಈ ಪ್ರಕ್ರಿಯೆ ಕುರಿತು ನಮ್ಮ ತಕರಾರಿಲ್ಲ ಆದರೆ ಮಾಜಿ ಸಂಸದ ಭೇಟಿ, ಮೂಲಭೂತವಾದಿ ಸಂಘಟನೆಗಳ ಸನ್ಮಾನ ಇದು ನಿಜಕ್ಕೂ ಖೇದಕರ ಎಂದರು.
ಕೊಲೆ ಆರೋಪಿಗಳನ್ನು ಸನ್ಮಾನಿಸುತ್ತ ಹೋದರೆ ಯಾವ ಪರಿಸ್ಥಿತಿ ನಿರ್ಮಾಣವಾಗಬಹುದೆಂಬುವುದು ಕಳವಳಕಾರಿ. ಈ ಸನ್ಮಾನದ ಕುರಿತು ಸುಮ್ಮನಿರುವುದು ಗೃಹ ಇಲಾಖೆಯ ವೈಫಲ್ಯವಾಗಿದೆ
ಬಿಲ್ಕೀಸ್ ಬಾನು ಸಾಮೂಹಿಕ ಅತ್ಯಾಚಾರದ ಅಪರಾಧಿಗಳನ್ನು ಬಿಡುಗಡೆ ಮಾಡಿದಾಗ ಅವರನ್ನು ಆರತಿ ಮಾಡಿ ಹೂವು ಹಾರ ಹಾಕಿ ಸನ್ಮಾನಿಸಲಾಗುತ್ತದೆ. ಇಂತಹ ಕೃತ್ಯ ಸ್ವಾಸ್ಥ್ಯ ಸಮಾಜಕ್ಕೆ ಮಾರಕವಾಗಬಹುದು ಎಂದರು.
ಹಿಂದು ಧರ್ಮಕ್ಕೆ ಅಪಾಯವಿರುವುದು ಹಿಂದುತ್ವವಾಗಿಗಳಿಂದ!
ಕವಿ ಸಂವರ್ತ್ ಸಾಹಿಲ್ ಮಾತನಾಡಿ, ಹಿಂದು ಧರ್ಮ ಅಪಾಯದಲ್ಲಿದೆ ಎಂಬ ಮಾತು ಚಾಲ್ತಿಯಲ್ಲಿದೆ. ಹಿಂದುತ್ವಕ್ಕೆ ಅಪಾಯವಿರುವುದು ಹಿಂದುತ್ವವಾದಿ ಸಂಘಟನೆಗಳಿಂದಾಗಿದೆ. ನಾನೂ ಹಿಂದು ಧರ್ಮದಲ್ಲೇ ಬೆಳೆದಿರುರುವುದು. ನನ್ನ ಧರ್ಮದಲ್ಲಿ ಮಾನವೀಯ ಮೌಲ್ಯಗಳಿವೆ. ಕೊಲೆ ಮಾಡಿ ಅಂತ ನಮ್ಮ ಧರ್ಮ ನನಗೆ ಕಲಿಸಿಲ್ಲ. ಆದರೆ ಇವತ್ತು ಗೌರಿ ಲಂಕೇಶ್ ಹತ್ಯೆ ನಡೆದಾಗ ಹಿಂದುತ್ವಾದಿಗಳು ಆರೋಪಿಗಳನ್ನು ಸನ್ಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಯಯೇ ಧರ್ಮದ ಮೂಲ. ಬ್ತೈನ್ ವಾಶ್ ಮಾಡಿ ಕೊಲೆ ಮಾಡುವಂತೆ ಅಮಾಯಕರನ್ನು ಪ್ರಚೋದಿಸುವುದು ಯಾವ ಧರ್ಮ. ಹಿಂದುತ್ವವಾದಿಗಳಿಂದ ಹಿಂದು ಧರ್ಮಕ್ಕೆ, ಮಾನವೀಯತೆಗೆ, ದೇಶಕ್ಕೆ ಅಪಾಯವಿದೆ. ಹಿಂದುತ್ವ ಅಳಿಸಿ ದೇಶವನ್ನು, ಮನುಷ್ಯತ್ವವನ್ನು, ಸಂವಿಧಾನ ಉಳಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ನಾಯಕರಾದ ಸುಂದರ್ ಮಾಸ್ತರ್ ಸೇರಿದಂತೆ ಹಲವಾರು ಮಂದಿ ಮಾತನಾಡಿದರು.
ಶ್ಯಾಮರಾಜ್ ಬಿರ್ತಿ, ಅನ್ವರ್ ಅಲಿ ಕಾಪು, ಯಾಸೀನ್ ಮಲ್ಪೆ, ಆಯಾನ್ ಮಲ್ಪೆ, ಅಝೀಜ್ ಉದ್ಯಾವರ, ನಝೀರ್ ಉಡುಪಿ, ಮಂಜುನಾಥ್ ಗಿಳಿಯಾರ್, ವೆರೋನಿಕಾ ಕರ್ನೆಲಿಯೋ, ಪ್ರೊ.ಶಾರದ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.