ಇಂದ್ರಾಳಿ ಮೇಲ್ಸೇತುವೆ ನಿರ್ಲಕ್ಷ್ಯ ವಹಿಸಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ಎ ಇಂದ್ರಾಳಿ ಮೇಲ್ಸೇತುವೆ ನಿರ್ಲಕ್ಷ್ಯ ವಹಿಸಿ ಕಾಮಗಾರಿ ನಡೆಸುತ್ತಿರುವ ಕಾರಣ ಅನೇಕ ಅಪಘಾತಗಳಾಗಿ ಸಾವು-ನೋವುಗಳು ಸಂಭವಿಸುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಅಪಘಾತಕ್ಕೆ ಕಾರಣಕರ್ತರಾದ ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಸೇರಿದಂತೆ ಮತ್ತಿತರ ಪ್ರಕರಣಗಳನ್ನು ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು. ಅವು ಇಂದು ನಗರದ ಮಣಿಪಾಲ ರಜತಾ ದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ 169 ಎ ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಪ್ರಗತಿ ಪರಿಶೀಲನೆ ಕುರಿತು ಚರ್ಚಿಸುವ ಸಲುವಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ರಾಷ್ಟ್ರೀಯ ಹೆದ್ದಾರಿ 169 ಎ ಇಂದ್ರಾಳಿ ಮೇಲ್ಸೇತುವೆ ರಸ್ತೆ ಕಾಮಗಾರಿ ವಿಳಂಬದಿಂದಾಗಿ ರಸ್ತೆ ಇಕ್ಕಟ್ಟಿನಿಂದಾಗಿ ಕಳೆದ ಎರಡು ವರ್ಷಗಳಿಂದ ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸಿ, ಮರಣ ಹೊಂದಿರುತ್ತಾರೆ. ಇದಕ್ಕೆಲ್ಲಾ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾರಣವಾಗಿದ್ದು, ರಸ್ತೆ ಅಪಘಾತ ಸಂಬಂ ಕಾರಣಕರ್ತರಾದ ರೈಲ್ವೆ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಭಿಯಂತರರು ಹಾಗೂ ಗುತ್ತಿಗೆದಾರರುಗಳ ಮೇಲೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬೇಕು ಎಂದು ಸೂಚನೆ ನೀಡಿದರು.

ಇಂದ್ರಾಳಿ ಬ್ರಿಡ್ಜ್ ಕಾಮಗಾರಿಯ ವಿಳಂಬದಿಂದಾಗಿ 2023 ನೆ ಸಾಲಿನಲ್ಲಿ 8 ಪ್ರಕರಣಗಳು ಆಗಿ , ಅಪಘಾತದಲ್ಲಿ ಒಬ್ಬ ಮೃತಪಟ್ಟರೆ, 7 ಪ್ರಕರಣಗಳಲ್ಲಿ ತೀವ್ರ ತರಹದ ಗಾಯ ಹಾಗೂ ಸಾಧಾರಣ ಗಾಯ ವಾಗಿರುತ್ತದೆ. 202 4 ನೇ ಸಾಲಿನಲ್ಲಿ 10 ಪ್ರಕರಣಗಳಾಗಿ, ಎರಡು ಪ್ರತ್ಯೇಕ ಅಪಘಾತದಲ್ಲಿ, 2 ಜನ ಮರಣ ಹೊಂದಿ 8 ಪ್ರಕರಣದಲ್ಲಿ 10 ಜನ ತೀವ್ರ ತರಹದ ಹಾಗೂ ಸಾಮಾನ್ಯ ಗಾಯಗಳು ಉಂಟಾಗಿವೆ. ಇದಕ್ಕೆಲ್ಲಾ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಭಿಯಂತರರ ನಿರ್ಲಕ್ಷ್ಯದ ಕಾಮಗಾರಿಯೇ ಕಾರಣ. ಈ ಸಂಬಂಧ ಬೇಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದ್ದರಿಂದ ಸೂಕ್ತ ಕ್ರಮಕ್ಕಾಗಿ ಕೇಂದ್ರ ಸಚಿವಾಲಯದ ಕಾರ್ಯಾಲಯಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.

ಇಂದ್ರಾಳಿ ವೆುೀಲ್ಸೇತುವೆ ಕಾಮಗಾರಿಯನ್ನು 2018-19 ನೇ ಸಾಲಿನಲ್ಲಿಯೇ ಕೈಗೊಳ್ಳಲು ನಿರ್ಧರಿಸಿ, ಕಾಮಗಾರಿಗೆ ಸಂಬಂದಿಸಿದ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯ , ಸಮನ್ವಯದ ಕೊರತೆಯಿಂದಾಗಿ ಕಾಮಗಾರಿ ನಿಧಾನ ಗತಿಯಲ್ಲಿ ಸಾಗಿದೆ. ಈ ಸಂಬಂಧ ಅಭಿಯಂತರರಿಗೆ ಏನೂ ಕೆಲಸಗಳನ್ನು ಮಾಡುತ್ತಿದ್ದೀರಾ, ನಿಮಗೆ ಹೇಳು ಕೇಳುವವರು ಯಾರು ಇಲ್ಲವೇ, ಅನೇಕ ಬಾರಿ ಸಭೆಗಳನ್ನು ಕರೆದು ಸೂಚನೆ ನೀಡಿದರೂ ವಿಳಂಬ ಮಾಡುತ್ತಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ಮುಂದಿನ ನವೆಂಬರ್ 10 ರ ಒಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಖಡಕ್ ಸೂಚನೆ ನೀಡಿದರು.

ಇಂದ್ರಾಳಿ ಮೇಲ್ಸೇತುವೆ ನಿರ್ಮಾಣಗೊಳ್ಳುತ್ತಿರುವ ಕಬ್ಬಿಣದ ವೆಲ್ಡರ್ ಕಾಮಗಾರಿಯ ಜೊತೆ ಜೊತೆಯಲ್ಲಿಯೇ ಅವುಗಳ ಗರ್ಡಲ್ಸ್ ಅನ್ನು ರೈಲ್ವೆ ಹಳಿಯ ಮೇಲೆ ನಿರ್ಮಾಣ ಮಾಡಲು ಗರ್ಡಲ್ಸ್ನ ಇನ್ಸ್‌ಪೆಕ್ಶನ್, ಅವುಗಳ ಬೇರಿಂಗ್ ಅಳವಡಿಸಿ ಚಾಲನೆ ಮಾಡುವುದು, ಅಳವಡಿಸುವ ಸಮಯದಲ್ಲಿ ರೈಲುಗಳ ಸಂಚಾರ ತಡೆಯುವುದು, ಒಪ್ಪಿಗೆ ಪಡೆಯುವುದನ್ನು ಸಹ ಏಕಕಾಲದಲ್ಲಿ ಮಾಡಬೇಕೆಂದು ಸೂಚನೆ ನೀಡಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ ಮಾತನಾಡಿ, ಕಾಮಗಾರಿಯ ವಿಳಂಬದ ಬಗ್ಗೆ ಅನೇಕ ಸಂಘ-ಸಂಸ್ಥೆಗಳು, ಸಾರ್ವನಿಕರು ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ಜಿಲ್ಲಾಡಳಿತವೇ ಉತ್ತರ ನೀಡಬೇಕು. ಸಂಬಂಧಪಟ್ಟ ಅಧಿಕಾರಿಗಳು ನಿಗಧಿತ ಕಾಲಾವಧಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳದಿರುವುದು ಇದಕ್ಕೆಲ್ಲಾ ಕಾರಣ. ಸಂಬಂಧಪಟ್ಟ ಅಧಿಕಾರಿಗಳ ಅಸಂಬದ್ಧ ಕಾಮಗಾರಿಯಿಂದ ರಸ್ತೆ ಅಪಘಾತದಿಂದ ಮರಣ ಹಾಗೂ ಅನೇಕ ಜನರಿಗೆ ತೀವ್ರ ಹಾಗೂ ಸಾಮಾನ್ಯ ಸ್ವರೂಪದ ಗಾಯಗಳಾಗಿವೆ. ಇವು ನಿಮ್ಮ ಕುಟುಂಬದಲ್ಲಿ ಆಗಿದ್ದರೆ, ನೀವು ಸಹಿಸುತ್ತಿದ್ದೀರಾ, ಕಾಮಗಾರಿ ವಿಳಂಬಕ್ಕೆ ಪ್ರತೀ ಸಭೆಯಲ್ಲೂ ಇಲ್ಲಸಲ್ಲದ ಕಾರಣ ಹೇಳುವುದು ಸರಿಯಲ್ಲ. ಇತ್ತೀಚೆಗೆ ನಡೆದ ರಸ್ತೆ ಅಪಘಾತ ಪ್ರಕರಣದಲ್ಲಿ ಗುತ್ತಿಗೆದಾರರ ರಾಷ್ಟ್ರೀಯ ಹೆದ್ದಾರಿ ಅಭಿಯಂತರರು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳ ಮೇಲೆ ಅಪರಾಧಿಗಳನ್ನಾಗಿ ಮಾಡುವುದರ ಜೊತೆಗೆ ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದರು. ಸಭೆಯಲ್ಲಿ ಅಪರ್ ಜಿಲ್ಲಾಧಿಕಾರಿ ಮಮತ ದೇವಿ ಜಿ.ಎಸ್, ಕೊಂಕಣ ರೈಲ್ವೆಯ ಸೀನೀಯರ್ ಇಂಜಿನಿಯರ್ ಗೋಕುಲ್‌ದಾಸ್, ಶೃಂಗೇರಿ-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು

Latest Indian news

Popular Stories