ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮೊಬೈಲ್ ಬಳಕೆ ಬಗ್ಗೆ ನಿರಂತರ ದೂರುಗಳು ಬರುತ್ತಿರುವ ಬೆನ್ನಲ್ಲೇ ಇತ್ತೀಚೆಗೆ ರೌಡಿಶೀಟರ್ ಸೋಮಶೇಖರ್, ಜೋಸೆಫ್ ಕೊಲೆ ಪ್ರಕರಣದಲ್ಲಿ ಸಾಕ್ಷಿದಾರರಿಗೆ ಬೆದರಿಕೆ ಸಂದೇಶ ಕಳುಹಿಸಿರುವ ಕುರಿತು ಜೈಲಿನ ಅಧೀಕ್ಷಕರ ವಿರುದ್ಧವೇ ತನಿಖೆ ನಡೆಸುವಂತೆ ಕಾರಾಗೃಹ ಐಜಿಪಿಗೆ ಕೋರ್ಟ್ ಆದೇಶ ಹೊರಡಿಸಿದೆ.
2021ರಲ್ಲಿ ಕೋರಮಂಗಲದಲ್ಲಿ ನಡೆದಿದ್ದ ರೌಡಿಶೀಟರ್ ಜೋಸೆಫ್ ಬಾಬು ಅಲಿಯಾಸ್ ಬಬ್ಲು ಕೊಲೆಯಲ್ಲಿ ಬಂಧನಕ್ಕೊಳಗಾಗಿರುವ ರೌಡಿ ಸೋಮಶೇಖರ್ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾನೆ. ಆಟೋ ಚಾಲಕನಾಗಿರುವ ಆರ್ಮುಗಂ ಇನ್ಸ್ಟಾಗ್ರಾಂ ಖಾತೆಯ ಮೆಸೆಂಜರ್ಗೆ ಸೆಪ್ಟಂಬರ್ 22ರಂದು ಸಲಗ ಸೋಮ ಹೆಸರಿನ ಐಡಿಯಿಂದ ಮೂರು ವಾಯ್ಸ ಮೆಸೇಜ್ ಕಳುಹಿಸಿದ್ದ. ಬಬ್ಲು ಕೊಲೆ ಪ್ರಕರಣದಲ್ಲಿ ಯಾರೊಬ್ಬರೂ ಕೋರ್ಟ್ನಲ್ಲಿ ಸಾಕ್ಷ್ಯ ಹೇಳಬಾರದು. ಸಾಕ್ಷ್ಯ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.
ಪ್ರಕರಣದ ಮಾಹಿತಿ ಪಡೆದಿರುವ ನ್ಯಾಯಾಲಯ, ಜೈಲು ಅಧೀಕ್ಷಕರ ವಿರುದ್ಧ ಐಜಿಪಿ ಸಮಗ್ರ ತನಿಖೆ ನಡೆಸಬೇಕು. ಅಲ್ಲದೆ, ಪ್ರಕರಣದ ವಿಚಾರಣೆ ಅಂತ್ಯವಾಗುವರೆಗೂ ಸಾಕ್ಷಿದಾರರಿಗೆ ಪ್ರಕರಣದ ತನಿಖಾಧಿಕಾರಿ ಹಾಗೂ ಕೋರಮಂಗಲ ಪೊಲೀಸರು ರಕ್ಷಣೆ ನೀಡಬೇಕು ಎಂದು ಸೂಚಿಸಿದೆ.