ಶಿರಸಿ: ಹೊಳೆ ಊಟಕ್ಕೆ ಹೋದ ವೇಳೆ ಅಚಾನಕ್ ಆಗಿ ನದಿಗೆ ಜಾರಿ ಬಿದ್ದ ನಾಲ್ಕು ವರ್ಷದ ಮಗುವನ್ನು ರಕ್ಷಿಸಲು ಹೋಗಿ ಐವರು ನೀರು ಪಾಲಾದ ಘಟನೆ ತಾಲೂಕಿನ ಭೈರುಂಬೆ ಸಮೀಪದ ಭೂತನಗುಂಡಿಯಲ್ಲಿ ರವಿವಾರ ಸಂಭವಿಸಿದೆ.
ಮೃತರನ್ನು ಮಹ್ಮದ್ ಸಲೀಮ್ ಖಲೀಲ್ ರೆಹಮಾನ್ (44), ನಾದಿಯಾ ನೂರ್ ಅಹ್ಮದ್ ಶೇಕ್ (20), ಮಿಸ್ಬಾ ತಬಸ್ಸುಮ್ (21), ನಬಿಲ್ ನೂರ್ ಅಹ್ಮದ್ ಶೇಖ್ (22), ಉಮರ್ ಸಾದಿಕ್ (16) ಎಂದು ಗುರುತಿಸಲಾಗಿದೆ. ರವಿವಾರ ಹೊಳೆ ಊಟ ಮಾಡಲು ಬಂಧುಗಳೆಲ್ಲ ಸೇರಿ 25ಕ್ಕೂ ಅಧಿಕ ಜನರು ಭೂತನಗುಂಡಿಯ ಬಳಿ ತೆರಳಿದ್ದರು.
ಆ ವೇಳೆ ಮಗುವೊಂದು ನೀರುಪಾಲಾದಾಗ ಓರ್ವ ಯುವಕ ರಕ್ಷಿಸಲು ಹೋಗಿದ್ದ. ಮಗುವನ್ನು ರಕ್ಷಿಸಿದ ಬಳಿಕ ಮರಳಿ ನೀರಿಗೆ ಜಾರಿ ಬಿದ್ದಿದ್ದ. ಇವನನ್ನು ರಕ್ಷಿಸಲು ಬಂಧುಗಳು ಪರಸ್ಪರ ಕೈ ಕೈ ಹಿಡಿದು ಸಾಹಸ ಮಾಡುತ್ತಿದ್ದಾಗ ಐವರು ನೀರುಪಾಲಾದರು. ಮೂವರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಇನ್ನಿಬ್ಬರಿಗಾಗಿ ಶೋಧ ನಡೆದಿದೆ.