ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ ಡಿ ಯಿಂದ ಬಂಧನಕ್ಕೊಳಗಾಗಿದ್ದ ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದ್ರ ಜೈನ್ ಅವರಿಗೆ ಶುಕ್ರವಾರ(ಅ18)ಜಾಮೀನು ಸಿಕ್ಕಿದೆ.
ದೆಹಲಿಯ ಕೋರ್ಟ್ , ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಜೈಲುವಾಸ ಅನುಭವಿಸುತ್ತಿರುವ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರಿಗೆ 50,000 ವೈಯಕ್ತಿಕ ಬಾಂಡ್ ಪಡೆದು ಷರತ್ತುಬದ್ದ ಜಾಮೀನು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷಿಗಳು ಅಥವಾ ವ್ಯಕ್ತಿಗಳನ್ನು ಸಂಪರ್ಕಿಸುವುದನ್ನು ನಿಷೇಧಿಸಿದೆ ಮತ್ತು ಯಾವುದೇ ರೀತಿಯಲ್ಲಿ ವಿಚಾರಣೆಯ ಮೇಲೆ ಪ್ರಭಾವ ಬೀರದಂತೆ ನಿರ್ಬಂಧ ವಿಧಿಸಿದೆ.
ನ್ಯಾಯಾಲಯವು ಜೈನ್ ಅವರ ಬಂಧನವನ್ನು ಉಲ್ಲೇಖಿಸಿ, ಮನೀಷ್ ಸಿಸೋಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ತೀರ್ಪನ್ನು ಉಲ್ಲೇಖಿಸಿ, ತ್ವರಿತ ವಿಚಾರಣೆಯ ಹಕ್ಕನ್ನು ಮೂಲಭೂತ ಹಕ್ಕು ಎಂದು ಒತ್ತಿಹೇಳಿದೆ.
ನಾಲ್ಕು ಶೆಲ್ ಕಂಪನಿಗಳ ಮೂಲಕ ಹಣವನ್ನು ಲಾಂಡರಿಂಗ್ ಮಾಡಿದ ಆರೋಪದ ಮೇಲೆ ಜೈನ್ ಅವರನ್ನು 2022, ಮೇ 30 ರಂದು ಇಡಿ ಬಂಧಿಸಿತ್ತು. ವೈದ್ಯಕೀಯ ಕಾರಣಗಳಿಗಾಗಿ 2023ರ ಮೇನಲ್ಲಿ ಸತ್ಯೇಂದ್ರ ಜೈನ್ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಈ ವರ್ಷದ ಮಾರ್ಚ್ನಲ್ಲಿ ನಿಯಮಿತ ಜಾಮೀನು ಕೋರಿಕೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.