ಪರಿಶಿಷ್ಟ ಜಾತಿ, ವರ್ಗಗಳ ಅಭಿವೃದ್ಧಿಗೆ ಹಣ ವಾಪಸ್ ಕೊಡಿ: ರಾಜ್ಯ ಸರ್ಕಾರಕ್ಕೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ಬೆಂಗಳೂರು: ಅಭಿವೃದ್ಧಿ ವಿಚಾರವನ್ನು ಸಂಪೂರ್ಣ ಕಡೆಗಣಿಸಿದ ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರವು ದಲಿತರನ್ನೂ ವಂಚಿಸಿದೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ; ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣವಾಗಿ ಸೋತಿದೆ ಎಂದು ಟೀಕಿಸಿದರು.

ಕೇವಲ 5 ಗ್ಯಾರಂಟಿಗಳು ಎಂದು ಹೇಳಿಕೊಂಡು, ಅದನ್ನೂ ಸರಿಯಾಗಿ ಜನರಿಗೆ ತಲುಪಿಸದೆ ವಂಚನೆ ಮಾಡಿದೆ. ಪರಿಶಿಷ್ಟ ಜಾತಿ- ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟ 25 ಸಾವಿರ ಕೋಟಿ ಹಣವನ್ನು ಈಗಾಗಲೇ ಅವರು ಬೇರೆಬೇರೆ ಕಾರ್ಯಗಳಿಗೆ ಉಪಯೋಗ ಮಾಡಿದ್ದಾರೆ. ಈ ಮೂಲಕ ದಲಿತರನ್ನೂ ವಂಚನೆ ಮಾಡಿದ್ದಾರೆ. ಅವರಿಗೆ ಮೋಸ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಇದರ ವಿರುದ್ಧ ಯಶಸ್ವಿ ಹೋರಾಟ ಮಾಡಿದ್ದೇವೆ. ಪರಿಶಿಷ್ಟ ಜಾತಿ- ವರ್ಗಗಳ ಶ್ರೇಯೋಭಿವೃದ್ಧಿಗೆ ಇಟ್ಟಿರುವ ಹಣವನ್ನು ಬೇರೆ ವಿಚಾರಗಳಿಗೆ ಪೋಲು ಮಾಡಬಾರದೆಂಬುದು ನಮ್ಮ ಉದ್ದೇಶವಾಗಿತ್ತು. ಆದರೆ, ಖಜಾನೆಯಲ್ಲಿ ಹಣ ಖಾಲಿ ಇರುವ ಕಾರಣ ದಾರಿ ತಪ್ಪಿಸಿ ಈ ಪರಿಶಿಷ್ಟ ಜಾತಿ- ವರ್ಗಗಳ ಹಣವನ್ನು ತೆಗೆದು ಬೇರೆಬೇರೆ ಕಾರ್ಯಗಳಿಗೆ ಉಪಯೋಗಿಸಿ ಅವರಿಗೆ ಅನ್ಯಾಯ ಮಾಡಲಾಗುತ್ತಿತ್ತು ಎಂದು ಟೀಕಿಸಿದರು.

ಕೊನೆಗೂ ಒಂದೂವರೆ ವರ್ಷದ ಬಳಿಕ 25 ಸಾವಿರ ಕೋಟಿ ಲೂಟಿ ಆದ ಬಳಿಕ ಮುಖ್ಯಮಂತ್ರಿಗಳಿಗೆ ನಿನ್ನೆ ಮನವರಿಕೆ ಆಗಿದೆ. ನಾವು ತಪ್ಪು ಮಾಡಿದ್ದೇವೆ. ಅವರ ಹಣವನ್ನು ನಾವು ಈ ರೀತಿ ಬಳಸಬಾರದಿತ್ತು ಎಂದು ನಿನ್ನೆ ಹೇಳಿದ್ದಾರೆ. ಕೊನೆಗೂ ಅವರಿಗೆ ತಪ್ಪಿನ ಅರಿವಾಗಿದೆ. ತಪ್ಪಾಗಿದೆ ಎಂದು ಹೇಳಿ ತಪ್ಪಿಸಿಕೊಳ್ಳುವ ಕೆಲಸ ಮಾಡಬೇಡಿ; ಇಂಥ ನಯವಂಚಕತನ ಬಹಳ ಚೆನ್ನಾಗಿ ನಿಮಗೆ ಗೊತ್ತಿದೆ. 25 ಸಾವಿರ ಕೋಟಿ ಹಣವನ್ನು ಆ ಜನಾಂಗಗಳಿಗೆ ಮತ್ತೆ ವಾಪಸ್ ಕೊಡಿ ಎಂದು ಆಗ್ರಹಿಸಿದರು.

ಸದಸ್ಯತ್ವ ನೋಂದಣಿ ಸಂಬಂಧ ಬೀದರ್, ಕಲಬುರ್ಗಿ ಮತ್ತಿತರ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಪ್ರವಾಸ ಮಾಡಿದ್ದೇನೆ. ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಬಿಜೆಪಿ ಅತಿ ದೊಡ್ಡ ರಾಜಕೀಯ ಪಕ್ಷ ಎನಿಸಿದೆ. ಸುಮಾರು 11 ವರ್ಷಗಳ ಕಾಲ ಮಾನ್ಯ ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ನಿಷ್ಕಳಂಕ ರಾಜಕಾರಣವನ್ನು ಮಾಡುತ್ತ ಬಂದಿದ್ದೇವೆ ಎಂದು ವಿವರಿಸಿದರು. ಕರ್ನಾಟಕದಲ್ಲಿ ಈ ಬಾರಿ 1 ಕೋಟಿ 80 ಲಕ್ಷ ಸದಸ್ಯರನ್ನು ನೋಂದಣಿ ಮಾಡಲು ಪಕ್ಷ ತೀರ್ಮಾನ ಮಾಡಿದೆ ಎಂದು ತಿಳಿಸಿದರು.

Latest Indian news

Popular Stories