ಬೆಂಗಳೂರು: ಬಿಜೆಪಿಯ ಸುಳ್ಳಿನ ಕಾರ್ಖಾನೆಯಲ್ಲಿ ಭರಪೂರ ಸುಳ್ಳುಗಳು ತಯಾರಾಗುತ್ತಿವೆ, ಆದರೆ, ಆ ಸುಳ್ಳುಗಳು ಮಾರುಕಟ್ಟೆಯಲ್ಲಿ ಬಿಕರಿಯಾಗುವುದಿಲ್ಲ ಅಷ್ಟೇ ಎಂದು ಕಾಂಗ್ರೆಸ್ ಹೇಳಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ತಮ್ಮ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳನ್ನು ಅಧೋಗತಿಗೆ ತಳ್ಳಿದ ಬಿಜೆಪಿ ಈಗ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಪೋಣಿಸುತ್ತಿದೆ. 2008ರಿಂದ 2013ರ ವರೆಗೆ ಬಿಜೆಪಿ ಅವಧಿಯಲ್ಲಿ ಪ್ರತಿ ಬಸ್ ಗೆ ಕೊಡುತ್ತಿದ್ದ ಹಣ 30 ರೂ. ಮತ್ತೆ ಬಿಜೆಪಿಯ 2019ರಿಂದ 2023ರವರೆಗೆ ಅವಧಿಯಲ್ಲಿ ಕೊಡುತ್ತಿದ್ದ ಹಣ 100 ರೂ, ಈಗ ಮತ್ತೆ ನಮ್ಮ ಸರ್ಕಾರ 100 ರೂಪಾಯಿಯಿಂದ 250 ರೂಪಾಯಿಗೆ ಏರಿಕೆ ಮಾಡಿ ಆದೇಶ ಹೊರಡಿಸಿದೆ ಎಂದಿದೆ.
ಸುಳ್ಳಿನ ಸರಮಾಲೆ ಕಟ್ಟುವ ರಾಜ್ಯ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಹಬ್ಬದ ಸಂದರ್ಭದಲ್ಲೂ ಸಾರಿಗೆ ನೌಕರರಿಗೆ ವೇತನ ನೀಡದೆ ಕಣ್ಣೀರು ಹಾಕಿಸಿದ್ದನ್ನು ಜನತೆ ಮರೆತಿಲ್ಲ, ಬಸ್ಸುಗಳ ಪೂಜೆಗೆ ಹೂವು, ನಿಂಬೆಹಣ್ಣಿಗೂ ಹಣ ಕೊಡದೆ ನೌಕರರು ಸ್ವಂತ ಹಣದಿಂದ ಪೂಜೆ ಮಾಡಿದ್ದನ್ನು ರಾಜ್ಯದ ಜನ ಮರೆತಿಲ್ಲ.ಸಾರಿಗೆ ಸಂಸ್ಥೆಯ ಆಸ್ತಿಗಳನ್ನು ಅಡಮಾನ ಇಟ್ಟ ಕೀರ್ತಿ ನಿಮಗೇ ಸಲ್ಲಬೇಕು. ಸಂಬಳ ನೀಡದೆ ನೌಕರರ ಮನೆಯ ಹಬ್ಬದ ಸಂಭ್ರಮ ಕಿತ್ತುಕೊಂಡಿದ್ದ ಬಿಜೆಪಿ ಸರ್ಕಾರಕ್ಕೆ ಮಕ್ಕಳು “ಸಿಎಂ ಅಂಕಲ್ ಸಂಬಳ ಕೊಡಿ” ಎಂದು ಅಂಗಲಾಚಿದ ಕರುಣಾಜನಕ ಸ್ಥಿತಿಯು ಇತಿಹಾಸವಾಗಿದೆ ಉಳಿದಿದೆ.