ತುಂಗಭದ್ರಾ ಡ್ಯಾಂ ಗೇಟ್‌ ಚೈನ್‌ ಕುಸಿತ ಪ್ರಕರಣ; ತನಿಖೆಗೆ ತಂಡ ರಚನೆ

ಹೊಸಪೇಟೆ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಳಚಿ ಬಿದ್ದ ಪ್ರಕರಣದ ತನಿಖೆ ನಡೆಸಲು ತುಂಗಭದ್ರಾ ಅಣೆಕಟ್ಟು ಮಂಡಳಿ ಆರು ಸದಸ್ಯರ ತಾಂತ್ರಿಕ ತಂಡವನ್ನು ರಚನೆ ಮಾಡಿದ್ದು, 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.

ದೆಹಲಿಯ ಪರಿಣತ ತಜ್ಞ ಎ.ಕೆ.ಬಜಾಜ್ ನೇತೃತ್ವದಲ್ಲಿ ತಾಂತ್ರಿಕ ಪರಿಶೀಲನಾ ಸಮಿತಿ ರಚನೆ ಮಾಡಲಾಗಿದ್ದು, ಈ ಸಮಿತಿ ಸೆ.9 ಮತ್ತು 10ರಂದು ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

ಅಣೆಕಟ್ಟು ಗೇಟ್ ತಜ್ಞರಾದ ಹರ್ಕೇಶ್ ಕುಮಾರ್‌, ತಾರಾಪುರಂ ಸುಧಾಕರ್, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸರ್ಕಾರಗಳ ತಾಂತ್ರಿಕ ಸಲಹಾ ಸಮಿತಿಯ ಪ್ರತಿನಿಧಿಗಳು ಈ ತಂಡದಲ್ಲಿ ಸದಸ್ಯರಾಗಿರುತ್ತಾರೆ. 15 ದಿನದಲ್ಲಿ ತನಿಖಾ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಗಸ್ಟ್ 10 ರಂದು, ಜಲಾಶಯದ ಕ್ರೆಸ್ಟ್ ಗೇಟ್ ಸಂಖ್ಯೆ 19 ಅಣೆಕಟ್ಟಿನಿಂದ ಸಂಪರ್ಕ ಕಡಿತಗೊಂಡು ನದಿಯಲ್ಲಿ ಕೊಚ್ಚಿಹೋಗಿತ್ತು. ಈ ಘಟನೆಯು ಜಲಾಶಯವನ್ನು ಅವಲಂಬಿಸಿರುವ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಮೂರು ರಾಜ್ಯಗಳ ರೈತರು ಮತ್ತು ಜನರಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಘಟನೆ ಬಳಿಕ ಅಧಿಕಾರಿಗಳ ಕಾರ್ಯವೈಖರಿ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ಸಮಸ್ಯೆಯನ್ನು ಸರಿಪಡಿಸಲಾಗಿದ್ದು, ತನಿಖೆಗೆ ತಂಡ ರಚನೆ ಮಾಡಲಾಗಿದೆ.

ಈ ತಂಡವು ಚೈನ್‌ ಲಿಂಕ್‌ನ ಬಲದೊಂದಿಗೆ ಲಂಬವಾಗಿ ನಿಂತಿದ್ದ ಕ್ರಸ್ಟ್‌ಗೇಟ್ ಕಳಚಿಕೊಳ್ಳಲು ನಿಜವಾಗಿ ಕಾರಣವೇನು? ಮಳೆಗಾಲಕ್ಕೆ ಮೊದಲು ಮತ್ತು ನಂತರ ಗೇಟ್‌ ಮತ್ತು ಚೈನ್‌ಲಿಂಕ್‌ಗಳನ್ನು ಆಗಾಗ್ಗೆ ಪರೀಕ್ಷಿಸಲಾಗುತ್ತಿತ್ತೇ ಎಂಬ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಮಾಡಲಿದೆ.

ಕ್ರಸ್ಟ್‌ಗೇಟ್‌ಗಳ ಆಯಸ್ಸು, ಕೊನೆಯ ಬಾರಿಗೆ ಮಾಡಿದ ದುರಸ್ತಿ, ಗೇಟ್‌ ಬದಲಿಸಿದ್ದರೆ ಯಾವಾಗ ಎಂಬುದನ್ನು ಅರಿತು ತಂಡ, ತುರ್ತು ಸಂದರ್ಭದಲ್ಲಿ ಬದಲಿ ಗೇಟ್ ಯಾಕೆ ಸಿದ್ಧಪಡಿಸಿರಲಿಲ್ಲ ಎಂಬುದನ್ನು ಪರಿಶೀಲಿಸಲಿದೆ. ಅಲ್ಲದೆ, ಪರಿಶೀಲನೆ ಬಳಿಕ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಶಿಫಾರುಗಳನ್ನು ಮಾಡಲಿದೆ.

Latest Indian news

Popular Stories