ಕಾರವಾರ: ಕಾಳಿ ಸೇತುವೆ ಅವಶೇಷ ಮೇಲೆತ್ತಲು ಇನ್ನೂ ಹದಿನೈದು ದಿನ ಕಾಯಬೇಕು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇತುವೆ ಅವಶೇಷ ಮೇಲೆತ್ತಲು ಸೆಪ್ಟೆಂಬರ್ ಮೂರನೇ ವಾರದಲ್ಲಿ ಪ್ರಾರಂಭಿಸುವುದಾಗಿ ಜಿಲ್ಲಾಡಳಿತಕ್ಕೆ ಭರವಸೆ ನೀಡಿದೆ. ಈ ಕುರಿತು ಭೇಟಿಯಾದ ಸುದ್ದಿಗಾರರ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಇನ್ನು ಹದಿನೈದು ದಿನಗಳಲ್ಲಿ ಕಾಳಿ ನದಿಗೆ ಬಿದ್ದ ಹಳೆಯ ಸೇತುವೆ ಅವಶೇಷ ಮೇಲೆತ್ತುವ ಕೆಲಸ ಪ್ರಾರಂಭವಾಗಲಿದೆ ಎಂದರು. ಅಲ್ಲದೇ ಬಹುತೇಕ ಹಳೆಯ ಸೇತುವೆ ಜಾಗದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಕಾಳಿ ನದಿಗೆ ಹೊಸ ಸೇತುವೆ ಸಹ ಬಹುತೇಕ ನಿರ್ಮಾಣವಾಗುವುದನ್ನು ಖಚಿತ ಪಡಿಸಿದರು.
ಸೇತುವೆ ಇದೇ ವರ್ಷದ ಅಗಸ್ಟ 7 ರಂದು ಕುಸಿದಿತ್ತು . 41 ವರ್ಷಗಳಷ್ಟು ಹಳೆಯದಾದ ಈ ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಐಆರ್ ಬಿ ಗುತ್ತಿಗೆ ಕಂಪನಿ ನಿರ್ವಹಣೆ ಮಾಡದೆ, ಬೇರಿಂಗ್ ಬದಲಿಸಿದ ಕಾರಣ ಕುಸಿದಿತ್ತು. ಜಪಾನ್ ತಂತ್ರಜ್ಞಾನ ಬಳಸಿ ಈ ಸೇತುವೆಯನ್ನು ಹತ್ತು ವರ್ಷಗಳ ಕಾಲ ಶ್ರಮಪಟ್ಟು ಕಟ್ಟಲಾಗಿತ್ತು. ಸೇತುವೆಯ ಶೇ.30 ಭಾಗ ನದಿಯಲ್ಲಿ ಕುಸಿದಿದ್ದು, ಶೇ. 70 ಭಾಗ ಹಾಗೆ ನಿಂತಿದೆ. ಕುಸಿದ ಭಾಗ ಹಾಗೂ ಕುಸಿಯದೇ ಇರುವ ಭಾಗದಲ್ಲಿ ದೋಣಿಗಳು ಚಲಿಸಲು ನಿಷೇಧ ಹೇರಲಾಗಿದೆ. ಇದರಿಂದ ಸಂಪ್ರದಾಯಿಕ ಮೀನುಗಾರರು, ಒಬ್ಬರೇ ನದಿಯಲ್ಲಿ ಪಾತಿ ದೋಣಿಯಲ್ಲಿ ಸಾಗಿ ಮೀನು ಹಿಡಿಯುವವರಿಗೆ ನದಿ ಸಮುದ್ರ ಸೇರುವ ಸಂಗಮ ಸ್ಥಾನದಲ್ಲಿ ಮೀನು ಹಿಡಿಯಲಾಗದ ಸ್ಥಿತಿ ಇದೆ. ಹಾಗಾಗಿ ಬಿದ್ದ ಸೇತುವೆ ಅವಶೇಷ ಎತ್ತಲು ಜಿಲ್ಲಾಡಳಿತದ ಮೇಲೆ ಒತ್ತಡ ಬರತೊಡಗಿದೆ. ಅಲ್ಲದೆ ಹಳೆಯ ಸೇತುವೆ ಮುರಿದ ಭಾಗ ಎತ್ತಲು ಕ್ರೇನ್ ಗಳು ಸಹ ಬಂದಿವೆ.ನದಿಯಿಂದ ತೆಗೆದ ಸ್ಲ್ಯಾಬ್,ಕಬ್ಬಿಣ, ಹಳೆಯ ಬಿಡಿ ಭಾಗದ ಅವಶೇಷ ಎಲ್ಲಿ ಹಾಕುವುದು ಎಂಬ ಸಮಸ್ಯೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್ ಬಿ ಕಂಪನಿಗೆ ಇತ್ತು. ಜಿಲ್ಲಾಡಳಿತದ ಬಳಿ ಅವರು ಅವಶೇಷ ಹಾಕಲು ಸ್ಥಳ ಕೇಳಿದ್ದರು. ಈಗ ಖಾಲಿ ಸ್ಥಳ ಸಹ ಸಿಕ್ಕಿದ್ದು,ಅವಶೇಷಗಳನ್ನು ಗಣೇಶ ಚತುರ್ಥಿ ನಂತರ ಎತ್ತಲಾಗುವುದು. ಹಾಗೆ ಹೊಸ ಸೇತುವೆ ನಿರ್ಮಾಣಕ್ಕೆ ಡಿಸೆಂಬರ್ ವೇಳೆಗೆ ಎಲ್ಲಾ ತಯಾರಿ ಮಾಡಿಕೊಂಡು ಮುಂದಿನ ವರ್ಷದ ಪ್ರಾರಂಭಕ್ಕೆ ಹೊಸ ಸೇತುವೆಗೆ ಪಿಲ್ಲರ್ ಹಾಕುವ ಕಾರ್ಯ ಆರಂಭವಾಗುವ ಲಕ್ಷಣಗಳು ಗೋಚರಿಸಿವೆ. ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭರದ ಸಿದ್ಧತೆ ನಡೆಸಿದೆ.
….